ನವದೆಹಲಿ: ಯೂರಿಯಾ ಉತ್ಪಾದಿಸಲು ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರತಿಯೊಂದು ತಾಲೂಕು ಕೇಂದ್ರದಲ್ಲಿ ಮೂತ್ರ ಬ್ಯಾಂಕ್ ಸ್ಥಾಪಿಸಲು ಮುಂದಾಗಿದ್ದು, ಆ ಮೂಲಕ ಯೂರಿಯಾ ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಹೊರಟಿದ್ದಾರೆ.
ಮನುಷ್ಯನ ಮೂತ್ರದಲ್ಲಿ ಸಾಕಷ್ಟು ನೈಟ್ರೋಜನ್ ಇದೆ. ಆದರೆ ಇದನ್ನು ವ್ಯರ್ಥ ಮಾಡುತ್ತಿದ್ದೇವೆ. ಕಸದಿಂದ ರಸ ತೆಗೆಯೋದು ನನ್ನ ಪ್ಯಾಶನ್. ಇದನ್ನ ಪ್ರಯತ್ನಿಸೋದ್ರಲ್ಲಿ ಯಾವುದೇ ಹಾನಿ ಇಲ್ಲ. ಈಗಾಗಲೇ ಫಾಸ್ಫರಸ್ ಮತ್ತ ಪೊಟಾಷಿಯಂಗೆ ಬದಲಿ ಸಾವಯವ ಇದೆ. ನೈಟ್ರೋಜನ್ ಕೂಡ ಸೇರಿಸಿದರೆ ಇನ್ನೂ ಹೆಚ್ಚು ಸಹಾಯಕವಾಗುತ್ತದೆ ಎಂದು ಗಡ್ಕರಿ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ .
ಈ ಯೋಜನೆ ಇನ್ನೂ ಪ್ರಾಥಮಿಕ ಹಂತದ ಪ್ರಸ್ತಾಪವಾಗಿದೆ. ಇದನ್ನ ವಾಸ್ತಚಿಕವಾಗಿ ಜಾರಿಗೆ ತರಲು ಸ್ವೀಡನ್ ವಿಜ್ಞಾನಿಗಳೊಂದಿಗೆ ಮಾತುಕತೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.
ಈ ಯೋಜನೆಯನ್ನು ಪ್ರಯೋಗಿಕವಾಗಿ ಗ್ರಾಮೀಣ ಭಾಗದಲ್ಲಿ ಆರಂಭ ಮಾಡಲಾಗುತ್ತದೆ. ಒಂದು ಬಾರಿಗೆ ಪ್ಲಾಸ್ಟಿಕ್ ಕ್ಯಾನ್ ನಲ್ಲಿ ಸಂಗ್ರಹಿಸಿದ 10 ಲೀಟರ್ ಮೂತ್ರ ತರಬೇಕು. ಪ್ರತಿ ಲೀಟರ್ ಮೂತ್ರಕ್ಕೆ 1 ರೂ. ನೀಡಲಾಗುತ್ತೆ. ಸರ್ಕಾರದಿಂದಲೇ ಪ್ಲಾಸ್ಟಿಕ್ ಕ್ಯಾನ್ ನೀಡುವ ವ್ಯವಸ್ಥೆ ಮಾಡಲಾಗುತ್ತದೆ. ನಂತರ ಮೂತ್ರವನ್ನ ಶುದ್ಧೀಕರಣ ಮಾಡಿ ಸಾವಯವ ಗೊಬ್ಬರ ತಯಾರು ಮಾಡಲಾಗುತ್ತದೆ ಎಂದು ವಿವರಿಸಿದರು.
ಈ ಯೋಜನೆಗೆ ತಗಲುವ ಆರ್ಥಿಕ ವೆಚ್ಚದ ಕುರಿತು ಮತ್ತು ಯೋಜನೆಯ ಕಾರ್ಯಸಾಧ್ಯತೆಯ ಬಗ್ಗೆ ಖಚಿತವಾಗಿಲ್ಲ. ಈ ಕುರಿತು ನಾಗ್ಪುರದ ಸಮೀಪದ ಧಪೇವಾಡಾ ಗ್ರಾಮದ ಪ್ರಯೋಗಲಯದಲ್ಲಿ ಆರಂಭಿಕ ಪರೀಕ್ಷೆಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.