ಬೆಂಗಳೂರು: ಸರ್ಕಾರ ಅಧಿಕಾರಕ್ಕೆ ಬಂದ ಆರುವರೆ ತಿಂಗಳಲ್ಲಿ ಮಾಡಿಕೊಂಡ ಎಡವಟ್ಟುಗಳನೇ ಮುಂದಿಟ್ಟು ಸದನದಲ್ಲಿ ಹೋರಾಟ ರೂಪಿಸಲು ಕಾಂಗ್ರೆಸ್ ಮುಂದಾಗಿದೆ. ಸದನದ ಒಳಗೆ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ತಪ್ಪುಗಳ ಪಟ್ಟಿಯನ್ನು ಕಾಂಗ್ರೆಸ್ ಸಿದ್ಧಪಡಿಸಿಕೊಂಡಿದೆ. ಕಳೆದ ಆರುವರೆ ತಿಂಗಳಲ್ಲಿ ಸರ್ಕಾರ ಎಲ್ಲೆಲ್ಲಾ ಎಡವಿತು ಹೇಗೆಲ್ಲಾ ಎಡವಿತು ಅನ್ನೋದನ್ನ ಪಟ್ಟಿ ಮಾಡಿರುವ ಕೈ ಪಾಳಯ ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರಸ್ ನಾಯಕರು ಪ್ಲಾನ್ ಮಾಡಿಕೊಂಡಿದ್ದಾರೆ.
ಒಟ್ಟು 12 ಅಂಶಗಳ ಚಾರ್ಜ್ ಶೀಟನ್ನ ಕೈ ನಾಯಕರುಗಳು ಸಿದ್ಧಪಡಿಸಿಕೊಂಡಿದ್ದಾರೆ. ಸರ್ಕಾರದ ವಿರುದ್ಧ ವಿಪಕ್ಷ ಕಾಂಗ್ರೆಸ್ ಬತ್ತಳಿಕೆಯಲ್ಲಿರುವ ಅಸ್ತ್ರಗಳು ಯಾವುವು ಎಂಬುದರ ಮಾಹಿತಿ ಈ ಕೆಳಗಿನಂತಿದೆ
1. ಉಪಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ಮೇಲೆ ಆದ ಐಟಿ ದಾಳಿ
2. ಎಲ್ಲಾ ಅನರ್ಹರನ್ನ ಮಂತ್ರಿ ಮಾಡುವ ಭರವಸೆ ನೀಡಿ ಮಾತು ತಪ್ಪಿದ್ದು.
3. ಪೂರ್ಣ ಪ್ರಮಾಣದ ಸಂಪುಟ ವಿಸ್ತರಣೆ ಮಾಡದೇ ಸಚಿವರುಗಳಿಗೆ ಹೆಚ್ಚುವರಿ ಖಾತೆ ನೀಡಿ ಅಸಮರ್ಪಕ ನಿರ್ವಹಣೆ.
4. ಮಂಗಳೂರು ಗೋಲಿಬಾರ್ ಪ್ರಕರಣ
5. ಮಾಜಿ ಸಚಿವ ಯು.ಟಿ.ಖಾದರ್ ವಿರುದ್ಧ ಪ್ರಕರಣ ದಾಖಲಿಸಿದ್ದು.
6. ಸಂಸದ ಅನಂತಕುಮಾರ್ ಹೆಗ್ಡೆ ವಿವಾದಾತ್ಮಕ ಹೇಳಿಕೆ
7. ಬೀದರ್ ನ ಶಾಹಿನ್ ಶಾಲೆಯ ದೇಶ ದ್ರೂಹ ಕೇಸು ದಾಖಲು ಪ್ರಕರಣ
8. ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಪ್ರಕರಣ ಹಾಗೂ ಅಶೋಕ್ ಪುತ್ರನ ಅಪಘಾತ ಪ್ರಕರಣದಲ್ಲಿ ಪೊಲೀಸ್ ಇಲಾಖೆ ನಡೆದುಕೊಂಡ ರೀತಿ.
9. ಮಠ ಮಾನ್ಯಗಳಿಗೆ ಅನ್ನ ದಾಸೋಹದ ಅಕ್ಕಿ ನಿಲ್ಲಿಸಿದ ಸರ್ಕಾರದ ಕ್ರಮ
10. ಬಿಜೆಪಿ ನಾಯಕರುಗಳ ಸಾಲು ಸಾಲು ವಿವಾದಾತ್ಮಕ ಹೇಳಿಕೆಗಳು
11. ರೈತರ ಸಾಲಮನ್ನದ ಬಗ್ಗೆ ಗೊಂದಲಕಾರಿ ಆದೇಶಗಳನ್ನ ಹೊರಡಿಸಿದ್ದು.
12. ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಲು 10 ಲಕ್ಷದ ಶ್ಯೂರಿಟಿ ನೀಡಬೇಕು ಎಂಬ ಷರತ್ತು
ಹೀಗೆ ಸರ್ಕಾರ ಮಾಡಿಕೊಂಡ ಸಾಲು ಸಾಲು ಎಡವಟ್ಟುಗಳನ್ನ ಕೈ ನಾಯಕರುಗಳು ಪಟ್ಟಿ ಮಾಡಿಕೊಂಡಿದ್ದಾರೆ. ಅದನ್ನೆ ಸರ್ಕಾರದ ವಿರುದ್ಧ ಅಸ್ತ್ರವಾಗಿ ಬಳಸಲು ಕಾಂಗ್ರೆಸ್ ನಾಯಕರು ಸಿದ್ಧವಾಗಿದ್ದಾರೆ. ಇಂದಿನಿಂದ ಆರಂಭವಾಗಿರುವ ಅಧಿವೇಶನ ಸರ್ಕಾರ ಹಾಗೂ ವಿರೋಧ ಪಕ್ಷದ ನಡುವಿನ ಜಟಾಪಟಿಗೆ ವೇದಿಕೆಯಾಗುವುದಂತು ಗ್ಯಾರಂಟಿ. ಅದಕ್ಕೆ ಪೂರಕವಾದ ಅಸ್ತ್ರಗಳನ್ನ ವಿಪಕ್ಷ ಕಾಂಗ್ರೆಸ್ ಸಿದ್ಧಪಡಿಸಿಕೊಂಡಿದೆ. ಆದರೆ ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷ ಬಿಜೆಪಿ ಬತ್ತಳಿಕೆಯಲ್ಲೂ ಸಾಕಷ್ಟು ಪ್ರತ್ಯಾಸ್ತ್ರಗಳು ಇರಬಹುದು. ಈ ಬೆಳವಣಿಗೆ ಸದನದಲ್ಲಿ ಕದನ ಕುತೂಹಲವನಂತು ಕಾಯ್ದಿರಿಸಿಕೊಂಡಿದೆ.