ಚಿಕ್ಕೋಡಿ: ನನ್ನ ಸರ್ವರ್ ಹ್ಯಾಕ್ (Server Hack) ಹೇಳಿಕೆಯನ್ನು ಇಲ್ಲಿಗೆ ಬಿಟ್ಟು ಬಿಡಿ. ಅದೊಂದು ರಾಜಕೀಯ ಸ್ಟೇಟ್ಮೆಂಟ್. ಬಿಜೆಪಿ ಅವರ ಇಂತಹ ನೂರಾರು ಹೇಳಿಕೆಗಳಿವೆ. ನನಗೆ ಅನುಮಾನ ಬಂದಿದ್ದನ್ನು ನಾನು ಹೇಳಿದ್ದೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಯೂಟರ್ನ್ ಹೊಡೆದಿದ್ದಾರೆ.
ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ನಿನ್ನೆ ಸರ್ವರ್ ಹ್ಯಾಕ್ ಆಗಿದೆ. ಅದನ್ನು ಕೇಂದ್ರದವರು ಹ್ಯಾಕ್ ಮಾಡಿರೋ ಅನುಮಾನ ಇದೆ ಎಂದು ನಾನು ಹೇಳಿದ್ದೇನೆ ಅಷ್ಟೇ. ಸರ್ವರ್ ಹ್ಯಾಕ್ ಆಗಿಲ್ಲ ಎಂದರೆ ಮುಗಿದು ಹೋಯಿತು. ಹಿಂದೆ ಕೇಂದ್ರ ಸರ್ಕಾರದ ಮೇಲೆ ಫೋನ್ ಟ್ಯಾಪಿಂಗ್ ಇವಿಎಮ್ ಹ್ಯಾಕ್ನಂತಹ ಆಪಾದನೆಗಳಿವೆ. ಹೀಗಾಗಿ ಅದೇ ರೀತಿ ಆಗಿರಬಹದು ಎನ್ನುವುದು ನನ್ನ ಸಂಶಯ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಧಾನಿಯಿಂದ ಹಿಡಿದು ಬಿಜೆಪಿಯವರು ಇಂತಹ ಅನೇಕ ಹೇಳಿಕೆ ಕೊಟ್ಟಿದ್ದಾರೆ. ಸರ್ವರ್ ಹ್ಯಾಕ್ ಹೇಳಿಕೆ ಕಾಂಗ್ರೆಸ್ ನಾಯಕರ ಸಮರ್ಥನೆಗೆ ಬಾರದ ವಿಚಾರ. ಅದು ನನ್ನ ಹೇಳಿಕೆಯಾಗಿದ್ದು, ಅವರ್ಯಾಕೆ ಸಮರ್ಥನೆಗೆ ಬರಬೇಕು? ನನಗೆ ಅನ್ನಿಸಿದನ್ನು ಹೇಳಿದ್ದೇನೆ. ಕೆಸರಿನಲ್ಲಿ ಕಲ್ಲು ಹುಡುಕುವುದು ಬೇಡ. ದಿನಾಲೂ ಸಾಕಷ್ಟು ಆರೋಪ ಪ್ರತ್ಯಾರೋಪಗಳು ಬರುತ್ತವೆ. ಎಲ್ಲದಕ್ಕೂ ಕಾಗದ ತೋರಿಸಲು ಆಗುವುದಿಲ್ಲ. ಬೇರೆ ಬೇರೆ ವಿಷಯಗಳ ಬಗ್ಗೆ ಚರ್ಚೆ ಮಾಡೋಣ. ಈ ವಿಷಯ ಇಲ್ಲೆ ಕ್ಲೋಸ್ ಮಾಡೋಣ ಎಂದು ಮನವಿ ಮಾಡಿದರು. ಇದನ್ನೂ ಓದಿ: ಅಕ್ಕಿ ಕೊಡಲು ಆಗದಿದ್ರೆ ಅಧಿಕಾರ ಬಿಟ್ಟು ತೊಲಗಿ: ಕಾಂಗ್ರೆಸ್ ವಿರುದ್ಧ ಶೋಭಾ ಕಿಡಿ
ಶಶಿಕಲಾ ಜೊಲ್ಲೆ 15 ಕೆಜಿ ಅಕ್ಕಿ ವಿತರಣೆ ಮಾಡಬೇಕು ಎನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಶಶಿಕಲಾ ಜೊಲ್ಲೆ ಹೇಳಿಕೆ ಆಧಾರ ರಹಿತ. 5+5 ಅಕ್ಕಿ ಕೊಡುತ್ತೇವೆ. 10 ಕೆಜಿ ಅಕ್ಕಿ ಅಷ್ಟೇ ಕೊಡುತ್ತೇವೆ. ಈರಣ್ಣ ಕಡಾಡಿ ಕಳ್ಳನಿಗೆ ಒಂದು ಪಿಳ್ಳೆ ನೆವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಂತಹ ಹೇಳಿಕೆಗಳು ಮುಗಿದು ಹೋಗಿವೆ. ಈಗ ಅದಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದರು.
ಅಭಿವೃದ್ಧಿ ಕಾರ್ಯಗಳ ಬಗ್ಗೆ ಹೆಚ್ಚು ವಿಚಾರ ಮಾಡುವಂತೆ ಬಿಜೆಪಿ ನಾಯಕರಿಗೆ ಸತೀಶ್ ಟಾಂಗ್ ನೀಡಿದ್ದಾರೆ. ಲೋಕೋಪಯೋಗಿ ಇಲಾಖೆಯ ಅಕ್ರಮಗಳ ಬಗ್ಗೆ ಬೇರೆ ಸಂಸ್ಥೆಗಳಿಂದ ತನಿಖೆ ಮಾಡಿಸುತ್ತೇವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಕಿರಣ್ ರಜಪೂತ್, ಇಲಿಯಾಸ್ ಇನಾಮದಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದನ್ನೂ ಓದಿ: ಸತೀಶ್ ಜಾರಕಿಹೊಳಿಗೆ ಬಾಯಿ ಚಪಲ, ಅವರೆಲ್ಲ ಮಂತ್ರಿಗಳಾ?: ಕುಮಾರಸ್ವಾಮಿ ಕಿಡಿ