ಚಾಮರಾಜನಗರ: ಸಾಮಾನ್ಯವಾಗಿ ಎಲ್ಲಾ ಕಡೆ ಗಣೇಶನಿಗೆ ಅಗ್ರ ಪೂಜೆಯಾದರೆ ಇಲ್ಲಿ ಮಾತ್ರ ಗೌರಿಗೆ ಮೊದಲ ಪ್ರಾಶಸ್ತ್ಯ. ನಾಡಿನ ಎಲ್ಲಾ ಕಡೆ ಗಣೇಶನನ್ನು ಪ್ರತಿಸ್ಠಾಪಿಸಿ ಪೂಜೆ ಸಲ್ಲಿಸುವುದು ವಾಡಿಕೆಯಾದರೆ ಈ ಗ್ರಾಮದಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿ 12 ದಿನಗಳ ಕಾಲ ಪೂಜೆ ಪುನಸ್ಕಾರ ಮಾಡಿ ನಂತರ ವಿಸರ್ಜಿಸಲಾಗುತ್ತೆ. ಗೌರಿಗಾಗಿ ಎಲ್ಲಿಯೂ ಪ್ರತ್ಯೇಕ ದೇವಾಲಯವಿಲ್ಲ. ಆದರೆ, ಈ ಗ್ರಾಮದಲ್ಲಿ ಗೌರಿಯ ದೇವಾಲಯವಿದೆ.
ಚಾಮರಾಜನಗರ (Chamarajanagara) ತಾಲೂಕು ಕುದೇರು (Kuderu) ಗ್ರಾಮದಲ್ಲಿ ಹನ್ನೆರಡು ದಿನಗಳ ಕಾಲ ಗೌರಿ ಹಬ್ಬ ಆಚರಿಸಲಾಗುತ್ತದೆ. ನಾಡಿನ ಎಲ್ಲಾ ಕಡೆ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಿದರೆ ಇಲ್ಲಿ ಗೌರಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತೆ. ಗೌರಿಹಬ್ಬದ ದಿನದಂದು ಬೆಳಿಗ್ಗೆ ಗ್ರಾಮದ ದೊಡ್ಡಕೆರೆಯ ಬಳಿ ವಿಶೇಷ ಹೋಮ ಹವನಗಳೊಂದಿಗೆ ಮರಳಿನ ಗೌರಿ ವಿಗ್ರಹ ಸಿದ್ಧಪಡಿಸಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಗ್ರಾಮದಲ್ಲಿರುವ ಸ್ವರ್ಣಗೌರಿ ದೇವಾಯಲದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಮೆರವಣಿಗೆ ಸಂದರ್ಭದಲ್ಲಿ ಸುತ್ತಮುತ್ತಲ ಗ್ರಾಮಗಳಷ್ಟೆ ಅಲ್ಲ ರಾಜ್ಯದ ವಿವಿಧೆಡೆಯಿಂದ ನೂರಾರು ಮಹಿಳೆಯರು ಬಂದು ಗೌರಿಗೆ ಬಾಗಿನ ಅರ್ಪಿಸುತ್ತಾರೆ. ಇದನ್ನೂ ಓದಿ: ನಾಡಿನಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ – ಗಗನಕ್ಕೇರಿದ ಹೂವುಗಳ ದರ
ಸ್ವರ್ಣಗೌರಿ (Swarna Gowri) ಎಂದು ಕರೆಯಲ್ಪಡುವ ಈ ಗೌರಮ್ಮನಿಗೆ ಹರಕೆ ಹೊತ್ತುಕೊಂಡರೆ ಎಲ್ಲಾ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ನಂಬಿಕೆಯಿದೆ. ಅದರಲ್ಲೂ ವಿಶೇಷವಾಗಿ ಕಂಕಣಭಾಗ್ಯ, ಸಂತಾನಭಾಗ್ಯ, ಮುತ್ತೈದೆ ಭಾಗ್ಯ ಲಭಿಸುತ್ತದೆ ಎಂಬ ನಂಬಿಕೆಯಿಂದ ರಾಜ್ಯದ ವಿವಿಧೆಡೆಯಿಂದ ಇಲ್ಲಿಗೆ ಭಕ್ತರ ದಂಡೆ ಹರಿದುಬರುತ್ತೆ. ಇಷ್ಟಾರ್ಥ ಸಿದ್ಧಿಸಿದವರು ಗೌರಿಗೆ ಬಾಗಿನ ಅರ್ಪಿಸಿ ತಮ್ಮ ಹರಕೆ ತೀರಿಸುತ್ತಾರೆ. ಮತ್ತೆ ಕೆಲವರು ಇದೇ ಸಂದರ್ಭದಲ್ಲಿ ಹರಕೆ ಹೊತ್ತುಕೊಳ್ಳುತ್ತಾರೆ. ಸಾಮನ್ಯವಾಗಿ ಗೌರಿಗೆ ಎಲ್ಲಿಯೂ ದೇವಾಲಯವಿಲ್ಲ. ಆದರೆ, ಕುದೇರು ಗ್ರಾಮದಲ್ಲಿ ನೂರ ಹತ್ತು ವರ್ಷಗಳ ಹಿಂದೆಯೇ ಸ್ವರ್ಣಗೌರಿ ದೇವಾಲಯ ನಿರ್ಮಿಸಲಾಗಿದೆ. ಗೌರಿಹಬ್ಬದ ದಿನದಂದು ಮೆರವಣಿಗೆ ನಂತರ ಗೌರಮ್ಮನನ್ನು ಸ್ವರ್ಣಗೌರಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿ 12 ದಿನಗಳ ಕಾಲ ವಿವಿಧ ರೀತಿಯಲ್ಲಿ ಅಲಂಕರಿಸಿ ಪೂಜೆ ಸಲ್ಲಿಸಿ ನಂತರ ವಿಜೃಂಭಣೆಯಿಂದ ವಿಸರ್ಜಿಸಲಾಗುತ್ತದೆ.