ಜೈಲಿಗೆ ಕಳುಹಿಸುವ ವಿಚಾರ : ಚಕ್ರವರ್ತಿ ಸೂಲಿಬೆಲೆ ಪರ ಬ್ಯಾಟ್ ಮಾಡಿದ ನಟ ಜಗ್ಗೇಶ್

Public TV
1 Min Read
Jaggesh

ಕೋಮು ಸೌಹಾರ್ದತೆಯನ್ನು ಹಾಳು ಮಾಡುವಂತಹ ಕೆಲಸವನ್ನು ಚಕ್ರವರ್ತಿ ಸೂಲಿಬೆಲೆ (chakravarthy sulibele) ಮುಂದುವರೆಸಿದರೆ ಜೈಲು (Jail) ಕಂಬಿ ಎಣಿಸುವಂತೆ ಮಾಡುತ್ತೇವೆ ಎಂದು ಸಚಿವ ಎಂ.ಬಿ. ಪಾಟೀಲ್ (MB Patil) ಹೇಳಿರುವ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಹಲಾಲ್, ಹಿಜಾಬ್, ಆಜಾನ್ ಸೇರಿದಂತೆ ಅನೇಕ ವಿಚಾರಗಳಲ್ಲಿ ಕೋಮು ಸೌಹಾರ್ದತೆಯನ್ನು ಕದಡುವಂತಹ ಕೆಲಸ ಮಾಡಲಾಗುತ್ತದೆ. ಅಂತಹ ಕೆಲಸ ಸೂಲಿಬೆಲೆ ಮಾಡಿದರೆ ಜೈಲಿಗೆ ಕಳುಹಿಸಲಾಗುವುದು ಎಂದಿದ್ದರು ಪಾಟೀಲ್.

m.b.patil

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು ಹೇಳಿದ ಈ ಮಾತಿಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಅಧಿಕಾರಕ್ಕೆ ಬಂದು ಇನ್ನೂ ಒಂದು ತಿಂಗಳು ಆಗಿಲ್ಲ, ಆಗಲೇ ಸಚಿವರು ದರ್ಪ ಮರೆಯುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಸೂಲಿಬೆಲೆ ಬೆಂಬಲಿಗರು ಕೂಡ ಸಚಿವರನ್ನು ತರಾಟೆಗೆ ತಗೆದುಕೊಂಡಿದ್ದರು. ಈ ಧಮಕಿ ಹಾಕುವುದನ್ನು ಬಿಡಿ ಎಂದು ಸಚಿವರಿಗೆ ಎಚ್ಚರಿಸಿದ್ದರು. ಇದನ್ನೂ ಓದಿ:ಹಿರಣ್ಯ ಚಿತ್ರಕ್ಕೆ ನಾಯಕಿಯಾದ ಖಾಸಗಿ ಕಂಪೆನಿ ಉದ್ಯೋಗಿ ರಿಹಾನಾ

chakravarthy sulibele

ಇದೀಗ ನಟ ರಾಜ್ಯಸಭಾ ಸದಸ್ಯ ಜಗ್ಗೇಶ್ (Jaggesh) ಕೂಡ ಚಕ್ರವತಿ ಸೂಲಿಬೆಲೆ ಪರವಾಗಿ ಬ್ಯಾಟ್ ಬೀಸಿದ್ದಾರೆ. ‘ಚಕ್ರವರ್ತಿ ಸೂಲಿಬೆಲೆ ಅವರ ಬೆನ್ನಿಗೆ ಕೋಟಿ ಸಂಖ್ಯೆಯ ಭುಜಕೊಡುವ ಶಕ್ತಿ ಜೀವಂತವಾಗಿದೆ’ ಎಂದು ಟ್ವೀಟ್ ಮಾಡಿದ್ದಾರೆ. ಸೂಲಿಬೆಲೆಯವರು ಸಮಾಜಮುಖಿ ಚಿಂತನೆ ಬಗ್ಗೆಯೂ ಬರೆದಿರುವ ಜಗ್ಗೇಶ್, ಯಾವ ಅಧಿಕಾರದ ಹಿಂದೆ ಹೋಗದೇ ಸಾಂಸ್ಕೃತಿಕ, ತತ್ವ, ವಿಚಾರ, ಕೆರೆಕಟ್ಟೆ ಪುನರ್ಜೀವನ, ಪ್ರವಚನದಂತಹ ಸಾತ್ವಿಕ ಚಿಂತಕ ಎಂದು ಹಾಡಿಹೊಗಳಿದ್ದಾರೆ.

ಜಗ್ಗೇಶ್ ಅವರ ಈ ಟ್ವೀಟ್ ಗೆ ಪರ ವಿರೋಧದ ಮಾತುಗಳು ಕೇಳಿ ಬಂದಿವೆ. ಅನೇಕರು ಸೂಲಿಬೆಲೆ ಮಾಡಿದ ಒಳ್ಳೆಯ ಕೆಲಸಗಳನ್ನು ಹೆಸರಿಸಿದ್ದರೆ, ಇನ್ನೂ ಕೆಲವರು ಯಾವೆಲ್ಲ ಕೋಮು ಕೆಲಸವನ್ನು ಮಾಡಿದ್ದಾರೆ ಎಂದು ಪಟ್ಟಿಯನ್ನೂ ನೀಡಿದ್ದಾರೆ. ಒಟ್ಟಿನಲ್ಲಿ ಜಗ್ಗೇಶ್ ಈ ಮೂಲಕ ಸೂಲಿಬೆಲೆಯವರ ಬಗ್ಗೆ ಚರ್ಚೆ ಮಾಡುವಂತಹ ವೇದಿಕೆ ಕಲ್ಪಿಸಿದ್ದಾರೆ.

Share This Article