– ಶಪಥ ಮುರಿದು ಕುದ್ರೋಳಿ ದೇವಸ್ಥಾನಕ್ಕೆ ಭೇಟಿ
ಮಂಗಳೂರು: ಜೀವನದಲ್ಲಿ ದೊಡ್ಡ ತಪ್ಪು ಮಾಡಿದ್ದೇನೆ, ಮನ್ನಿಸು ಎಂದು ಕಾಂಗ್ರೆಸ್ನ ಹಿರಿಯ ನಾಯಕ ಜನಾರ್ದನ ಪೂಜಾರಿ ಗೋಕರ್ಣನಾಥನ ಮುಂದೆ ಕ್ಷಮೆ ಯಾಚಿಸಿದ್ದಾರೆ.
ನಗರದ ಪ್ರಸಿದ್ಧ ಕುದ್ರೋಳಿ ದೇವಸ್ಥಾನಕ್ಕೆ ಭಾನುವಾರ ಜನಾರ್ದನ ಪೂಜಾರಿ ಅವರು ಭೇಟಿ ನೀಡಿದರು. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಮಾಡಿದ್ದ ಶಪಥವನ್ನು ಮುರಿದಿದ್ದಾರೆ.
ಒಂದು ವೇಳೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ಗೆಲುವು ಸಾಧಿಸದಿದ್ದರೆ ಕುದ್ರೋಳಿ ದೇವಸ್ಥಾನ ಪ್ರವೇಶ ಮಾಡುವುದಿಲ್ಲ ಎಂದು ಜನಾರ್ದನ ಪೂಜಾರಿ ಶಪಥ ಮಾಡಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ನಳೀನ್ ಕುಮಾರ್ ಕಟೀಲ್ ವಿರುದ್ಧ ಮಿಥುನ್ ರೈ ಸೋಲು ಕಂಡಿದ್ದರು.
ಜನಾರ್ದನ ಪೂಜಾರಿ ಅವರು ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ರೂವಾರಿಯಾಗಿದ್ದಾರೆ. ಪ್ರತಿಜ್ಞೆ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಕ್ಷೇತ್ರಕ್ಕೆ ಭೇಟಿ ನೀಡಿ, ಗೋಕರ್ಣನಾಥನಿಗೆ ಕ್ಷಮೆ ಕೇಳಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಸಂಸದ ನಳಿನ್ ಕುಮಾರ್ ಕಟೀಲ್ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ನರೇಂದ್ರ ಮೋದಿ ಅಲೆಯಲ್ಲಿ 2,74,621 ಮತಗಳ ಅಂತರದಿಂದ ಮೂರನೇ ಬಾರಿ ಲೋಕಸಭೆ ಪ್ರವೇಶ ಮಾಡಿದ್ದಾರೆ. ಕಟೀಲ್ 7,74,285 ಮತಗಳನ್ನು ಪಡೆದರೆ ಕಾಂಗ್ರೆಸ್ಸಿನ ಮಿಥುನ್ ರೈ 4,99,664 ಮತಗಳನ್ನು ಪಡೆದಿದ್ದರು.