ಬೆಂಗಳೂರು: ಹಿರಿಯ ನಟ ಶಂಕರ್ ಅಶ್ವಥ್ ಅವರು ನಟ ಅರ್ಜುನ್ ಸರ್ಜಾ ಅವರನ್ನು ಹೊಗಳಿ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾರೆ.
ಇತ್ತೀಚೆಗೆ ಶಂಕರ್ ಅಶ್ವಥ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟಿಸುತ್ತಿರುವ ‘ಪೊಗರು’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಚಿತ್ರೀಕರಣದ ಬಿಡುವಿನ ಸಮಯದಲ್ಲಿ ಇಬ್ಬರು ಮಾತುಕತೆ ನಡೆಸುವಾಗ ಅರ್ಜುನ್ ಸರ್ಜಾ ಅವರ ಬಗ್ಗೆ ಮಾತನಾಡಿದ್ದಾರೆ. ಧ್ರುವ ಜೊತೆ ಮಾತನಾಡಿದ ಬಳಿಕ ಶಂಕರ್ ಅಶ್ವಥ್ ಅವರು ತಮ್ಮ ಅನುಭವವನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕುವ ಮೂಲಕ ಹಂಚಿಕೊಂಡಿದ್ದಾರೆ.
ಪೋಸ್ಟ್ ನಲ್ಲಿ ಏನಿದೆ?
ಗ್ರೇಟ್ ಅರ್ಜುನ್ ಸರ್ಜಾ – ಈ ಗುಣಕ್ಕೆ ಏನೆಂದು ನಾ ಹೇಳಲಿ. ಇದು ಸತ್ಯ ನಾನು ಹೈದರಾಬಾದ್ ನಲ್ಲಿ ಪೊಗರು ಚಿತ್ರೀಕರಣಕ್ಕೆ ಹೋದ ಸಂದರ್ಭದಲ್ಲಿ ನಡೆದ ನೈಜಸಂಗತಿ ಇದರಲ್ಲಿ ಯಾವ ಉಪ್ಪು ಸೊಪ್ಪು ಬೆರತಿಲ್ಲ. ನಾಯಕ ನಟರಾದ ಧೃವ ಸರ್ಜಾ “ನಾನು ಚಿಕ್ಕವನಿದ್ದಾಗ ನಿಮ್ಮ ಮನೆಗೆ ಮಾಮ ಅರ್ಜುನ್ ಸರ್ಜಾ ಜೊತೆಯಲ್ಲಿ ಬಂದಿದ್ದೆ” ಅಂದಾಗ ನನಗೆ ಜ್ಞಾಪಕ ಬರಲಿಲ್ಲ. ಅದಕ್ಕೆ “ನಾಳೆ ನೀವು ಇರ್ತೀರಾ ಮಾಮನೂ ಇಲ್ಲಿ ಬೇರೆ ಚಿತ್ರೀಕರಣಕ್ಕೆ ಬಂದಿದ್ದಾರೆ ಅವರ ಹತ್ತಿರ ಆ ಫೋಟೋ ಇದೆ ತೋರಿಸ್ತೇನೆ” ಎಂದಾಗ ಇಲ್ಲಾ ನಾನು ಬೇರೆ ಚಿತ್ರೀಕರಣಕ್ಕೆ ಕೋಲಾರಕ್ಕೆ ಹೋಗಬೇಕೆಂದೆ. ಆಗ ತಕ್ಷಣವೇ ಅರ್ಜುನ್ ಸರ್ಜಾಗೆ ಫೋನ್ ಮಾಡಿ ಅವರ ಮೊಬೈಲ್ ನಲ್ಲಿದ್ದ ಈ ಫೋಟೋ ತರಿಸಿಕೊಂಡು ನನಗೆ ಕಳುಹಿಸಿದರು. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ 2006ನೇ ಇಸವಿಯಲ್ಲಿ ನಮ್ಮ ತಂದೆಯನ್ನು ನೋಡಲು ಬಂದಾಗ ತೆಗೆದ ಈ ಫೋಟೋ 13 ವರ್ಷಗಳ ನಂತರವೂ ಅರ್ಜುನ್ ಸರ್ಜಾರ ಮೊಬೈಲ್ ನಲ್ಲಿದೆ ಎಂದರೆ ಆತ ನನ್ನ ತಂದೆಗೆ ಎಷ್ಟು ಗೌರವ ಕೊಡುತ್ತಾರೆ, ಎಂತಹ ದೊಡ್ಡ ಮನುಷ್ಯ ಎಂದು ಬರೆದು ಹಾಕಿದ್ದಾರೆ.
ಸಿನಿಮಾ ಅವಕಾಶ ಇಲ್ಲದೇ ಕ್ಯಾಬ್ ಚಾಲಕರಾಗಿದ್ದ ಶಂಕರ್ ಅಶ್ವಥ್ ಅವರಿಗೆ ಸಿನಿಮಾ ಅವಕಾಶಗಳು ಸಿಗುತ್ತಿದೆ. ಇತ್ತೀಚೆಗೆ ಬಿಡುಗಡೆಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿದ ‘ಯಜಮಾನ’ ಚಿತ್ರದಲ್ಲಿ ಶಂಕರ್ ಅಶ್ವಥ್ ನಟಿಸಿದ್ದರು. ಈಗ ಅವರು ಧ್ರುವ ನಟನೆಯ ‘ಪೊಗರು’ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv