ಬೆಂಗಳೂರು: ರಷ್ಯಾ ಭಾಷೆ ಮಾತಾಡುವ ರಾಯಭಾರಿಗಳನ್ನು ಉಕ್ರೇನ್ಗೆ ಕಳುಹಿಸಲಾಗುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿದೇಶಾಂಗ ಸಚಿವರ ಜೊತೆ ಬೆಳಗ್ಗೆ ಮಾತಾಡಿದ ಬೊಮ್ಮಾಯಿ ಅವರು, ಕರ್ನಾಟಕದ ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಚರ್ಚೆ ನಡೆಸಿದ್ದಾರೆ. ವಿದ್ಯಾರ್ಥಿಗಳು ಸುರಕ್ಷಿತವಾಗಿರಬೇಕು ಎಂದು ಕೇಳಿಕೊಂಡಿದ್ದಾರೆ. ಉಕ್ರೇನಿನ ಪಶ್ಚಿಮ ಭಾಗದಲ್ಲಿ ಸಿಲುಕಿದವರ ಸ್ಥಳಾಂತರ ಮಾಡುವ ಚಿಂತನೆ ನಡೆಯುತ್ತಿದೆ ಎಂಬ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ವೈದ್ಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಉಕ್ರೇನ್, ರಷ್ಯಾಗೇ ಹೆಚ್ಚಾಗಿ ಯಾಕೆ ಹೋಗ್ತಾರೆ ಗೊತ್ತಾ?
ಉಕ್ರೇನ್ನಲ್ಲಿ ರಾಜ್ಯದ ವಿದ್ಯಾರ್ಥಿಗಳು ಸಿಕ್ಕಿಕೊಂಡಿರುವ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಇವತ್ತು ನಮ್ಮ ವಿದೇಶಾಂಗ ಸಚಿವ ಜೈಶಂಕರ್ ಅವರ ಜೊತೆ ಮಾತಾಡಿದ್ದೇನೆ. ವಿದ್ಯಾರ್ಥಿಗಳ ಸಂಪೂರ್ಣ ವಿವರಗಳನ್ನು ಅವರು ಪಡೆದುಕೊಂಡಿದ್ದಾರೆ. ಕರ್ನಾಟಕದ ಬಹಳಷ್ಟು ವಿದ್ಯಾರ್ಥಿಗಳು ಮೆಡಿಕಲ್ ಕಲಿಯಲು ಹೋಗಿದ್ದಾರೆ. ಆ ವಿದ್ಯಾರ್ಥಿಗಳು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂದು ತಿಳಿಸಿದರು.
ಎಲ್ಲ ವಿದ್ಯಾರ್ಥಿಗಳನ್ನು ಸದ್ಯಕ್ಕೆ ಸುರಕ್ಷಿತ ಸ್ಥಳದಲ್ಲಿ ಇರಿಸಬೇಕು. ಇದಕ್ಕೆ ಭಾರತ ಸರ್ಕಾರ ಹಲವು ಪ್ರಯತ್ನಗಳನ್ನು ಮಾಡ್ತಿದೆ. ರಷ್ಯಾ ಭಾಷೆ ಮಾತಾಡುವ ರಾಯಭಾರಿಗಳನ್ನು ಉಕ್ರೇನ್ ಗೆ ಕಳಿಸ್ತಿದ್ದಾರೆ. ಅಲ್ಲಿಂದ ವಿದ್ಯಾರ್ಥಿಗಳನ್ನು ರಸ್ತೆಯ ಮಾರ್ಗದಲ್ಲಿ ಸ್ಥಳಾಂತರ ಮಾಡುವ ಪ್ರಯತ್ನಗಳು ಆಗ್ತಿವೆ. ವಿದ್ಯಾರ್ಥಿಗಳಿಗೆ ಆಹಾರದ ವ್ಯವಸ್ಥೆ ಮಾಡುಲು ತಿಳಿಸಿದ್ದೇವೆ. ಇದುವರೆಗೆ ಯಾವುದೇ ವಿದ್ಯಾರ್ಥಿಗಳಿಗೆ ತೊಂದರೆ ಆಗಿಲ್ಲ ಎಂದರು.
ವಾಯು ಮಾರ್ಗದ ಮೂಲಕ ಸ್ಥಳಾಂತರ ಆಗುತ್ತಿಲ್ಲ. ಈ ಸಂಬಂಧ ವಿದೇಶಾಂಗ ಮಟ್ಟದಲ್ಲಿ ಮಾತುಕತೆಗಳನ್ನು ಮಾಡಲಾಗುತ್ತಿದೆ. ಉಕ್ರೇನಿನ ಪಶ್ಚಿಮ ಭಾಗದಲ್ಲಿರುವ ಸ್ಥಳಾಂತರ ರಸ್ತೆ ಮಾರ್ಗದ ಮೂಲಕ ಮಾಡಬಹುದೆಂಬ ಚಿಂತನೆ ನಡೀತಿದೆ. ಆದರೂ ಕೂಡ ಭಾರತೀಯ ರಾಯಭಾರಿ ಕಚೇರಿ ಹೇಳದ ಹೊರತು ಯಾರೂ ಹೋಗಬಾರದು. ಇಂಥ ಸಂದರ್ಭದಲ್ಲಿ ಸುಮ್ಮಸುಮ್ಮನೆ ಯಾರೂ ಬರಬಾರದು ಎಂದು ಎಚ್ಚರಿಕೆ ಕೊಟ್ಟರು. ಇದನ್ನೂ ಓದಿ: ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್ಗೆ ಉಕ್ರೇನ್ ಕರೆ!
ಸರಿಯಾದ ಸಂದರ್ಭ ನೋಡಿಕೊಂಡು ನಮ್ಮ ರಾಯಭಾರಿ ಕಚೇರಿ ಸಂದೇಶ ಕೊಡಲಿದೆ. ಎಲ್ಲರೂ ಸುರಕ್ಷಿತವಾಗಿ ಇದ್ದಾರೆ. ಎಲ್ಲರ ಜೊತೆ ನಮ್ಮ ರಾಯಭಾರಿ ಕಚೇರಿ ಅಧಿಕಾರಿಗಳು ಸಂಪರ್ಕದಲ್ಲಿ ಇದ್ದಾರೆ. ನಮ್ಮವರಿಗೆ ಊಟ, ತಿಂಡಿಯ ವ್ಯವಸ್ಥೆ ಮಾಡುವಂತೆ ಹೇಳಿದ್ದೇವೆ. ನಮ್ಮ ಸರ್ಕಾರವೂ ಸಹಾಯವಾಣಿಯನ್ನು ಆರಂಭಿಸಿದೆ. ಭಾರತ ಸರ್ಕಾರವೂ ಸಹ ಆರಂಭಿಸಿದೆ. ಯುದ್ಧದ ಪರಿಸ್ಥಿತಿ ತಿಳಿದುಕೊಳ್ಳುವವರೆಗೂ ಎಲ್ಲರೂ ಎಚ್ಚರಿಕೆಯಿಂದಿರಬೇಕೆಂದು ವಿದೇಶಾಂಗ ಇಲಾಖೆಯಿಂದ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.