ಬೆಂಗಳೂರು: ಇಂದು ವಿಧಾನಸೌಧದಲ್ಲಿ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಯವರ ಎದುರೆ ಪಕ್ಷದ ಶಾಸಕರು ಮತ್ತು ಎಂಎಲ್ಸಿ ಸಂದೇಶ್ ನಾಗರಾಜ್ ನಡುವೆ ಮಾತಿನ ಸಮರ ನಡೆದಿದೆ.
ಇಂದಿನ ಶಾಸಕಾಂಗದ ಸಭೆಗೆ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಹಾಜರಾಗಿದ್ದರು. ಸಂದೇಶ್ ನಾಗರಾಜ್ ಅವರನ್ನು ನೋಡುತ್ತಿದ್ದಂತೆ ಸಚಿವರಾದ ಸಾ.ರಾ.ಮಹೇಶ್ ಮತ್ತು ಪುಟ್ಟರಾಜು ಆಕ್ರೋಶದ ಮಾತುಗಳನ್ನು ಹೊರಹಾಕಲು ಆರಂಭಿಸಿದರು ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
ಚುನಾವಣಾ ಸಂದರ್ಭದಲ್ಲಿ ಸಂದೇಶ್ ನಾಗರಾಜ್ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು. ಚುನಾವಣೆಯಲ್ಲಿ ನಮ್ಮ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಕೂಡಲೇ ಸಂದೇಶ್ ಅವರನ್ನು ಸಭೆಯಿಂದ ಹೊರಗೆ ಕಳುಹಿಸಿ ಎಂದು ಸಚಿವರು ಮತ್ತು ಶಾಸಕರು ಸೇರಿದಂತೆ ಹಲವು ನಾಯಕರು ಆಗ್ರಹಿಸಿದ್ದಾರೆ.
ಮಾನ ಮರ್ಯಾದೆ ಇಲ್ಲದೆ ಸಭೆಗೆ ಬಂದಿದ್ದೀಯ ಅಂತಾ ಸಂದೇಶ್ ನಾಗರಾಜ್ ವಿರುದ್ಧ ಸಚಿವ ಪುಟ್ಟರಾಜು ಆಕ್ರೋಶ ಹೊರಹಾಕಿದರು. ನಾಯಕರ ಆಕ್ಷೇಪಗಳು ಜೋರಾಗುತ್ತಿದ್ದಂತೆ ಜೆಡಿಎಸ್ ಹಿರಿಯ ಮುಖಂಡ, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರು ಎಲ್ಲರನ್ನು ಸಮಾಧಾನ ಪಡಿಸಿದರು ಎಂದು ಮೂಲಗಳು ತಿಳಿಸಿವೆ.