ಚಿಕ್ಕಮಗಳೂರು: ಇಳಿ ಸಂಜೆಯಲ್ಲಿ ಜಲಪಾತದ ಬಳಿ ಸೆಲ್ಫಿ ತೆಗೆಯಲು ಹೋಗಿ ಯುವಕನೋರ್ವ ಕಾಲು ಜಾರಿ ಬಿದ್ದಿರೋ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಆಲೇಖಾನ್ ಜಲಪಾತದಲ್ಲಿ ನಡೆದಿದೆ.
ಸಂಜೆಯಾದ್ದರಿಂದ ಸೆಲ್ಫಿ ತೆಗೆಯುವಾಗ ಕಾಲು ಜಾರಿ ಬಿದ್ದ ಯುವಕ ಸುಮಾರು 80 ಅಡಿ ಆಳಕ್ಕೆ ಬಿದ್ದಿದ್ದಾನೆ. ನೀರಿನ ಜೊತೆಯೇ ಬಿದ್ದಿದ್ದರಿಂದ ಅದೃಷ್ಟವಶಾತ್ ಸಾವಿನಿಂದ ಪಾರಾಗಿದ್ದಾನೆ. 80 ಅಡಿ ಆಳದಿಂದ ಬಿದ್ದ ರಭಸಕ್ಕೆ ಯುವಕನ ಕೈ-ಕಾಲು ಮುರಿದು ಹೋಗಿದ್ದು, ಗಂಭೀರ ಗಾಯದಿಂದ ತೀವ್ರ ಅಸ್ವಸ್ತನಾಗಿದ್ದ ಯುವಕನನ್ನ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಆಸ್ಪತ್ರೆಗೆ ರವಾನಿಸಲಾಗಿದೆ.
ಗಾಯಾಳುವನ್ನು ಅಭಿಷೇಕ್ ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಕಂಪನಿಯೊಂದರ ಟವರ್ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದ ವಾಹನದಲ್ಲಿದ್ದ ತುಮಕೂರು ಜಿಲ್ಲೆ ಪಾವಗಡ ಮೂಲದ ಮೂವರು ಯುವಕರಿದ್ದರು. ಸಂಜೆ 7 ಗಂಟೆ ಸುಮಾರಿಗೆ ಚಾರ್ಮಾಡಿ ಘಾಟಿಯ ಆಲೇಕಾನ್ ಜಲಪಾತ ಬಂದ ವೇಳೆ ಸೆಲ್ಫಿ ತೆಗೆಯುವ ಭರದಲ್ಲಿ ಅಭಿಷೇಕ್ ಕಾಲು ಜಾರಿ ಜಲಪಾತದ ಪ್ರಪಾತಕ್ಕೆ ಬಿದ್ದಿದ್ದಾನೆ. ಇದನ್ನೂ ಓದಿ: ಅಲ್ಪಸಂಖ್ಯಾತರ ಓಲೈಕೆಗಾಗಿ RSS ವಿರುದ್ಧ ಕಾಂಗ್ರೆಸ್ ಹೇಳಿಕೆ ನೀಡುತ್ತಿದೆ: ಬೊಮ್ಮಾಯಿ
ವಿಷಯ ತಿಳಿಯುತ್ತಿದ್ದಂತೆ ಬಣಕಲ್ ಠಾಣೆ ಪೊಲೀಸರು ಹಾಗೂ ಆಂಬ್ಯುಲೆನ್ಸ್ ಸ್ಥಳಕ್ಕೆ ಧಾವಿಸಿದ್ದು, ಜಲಪಾತದ ಪ್ರಪಾತಕ್ಕೆ ಬಿದ್ದು ಕೈ-ಕಾಲು ಮುರಿದುಕೊಂಡಿದ್ದ ಕೂಡಲೇ ಉಜಿರೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಲೇಖಾನ್ ಜಲಪಾತದ ಬಳಿ ಈ ಹಿಂದೆ ಕೂಡ ಹಲವರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಕೈ-ಕಾಲು ಮುರಿದುಕೊಂಡಿದ್ದಾರೆ. ಜಲಪಾತದ ಬಳಿ ಎಚ್ಚರಿಕೆಯ ಸೂಚನಾ ಫಲಕವನ್ನು ಅಳವಡಿಸಲಾಗಿತ್ತು. ಆದರೆ 2019ರಲ್ಲಿ ಸುರಿದ ಮಳೆಗೆ ಸೂಚನಾ ಫಲಕ ಕೊಚ್ಚಿ ಹೋಗಿದ್ದು ಸೂಚನಾ ಫಲಕ ಇಲ್ಲದಿರುವುದಿಂದ ಜಲಪಾತಕ್ಕೆ ಪ್ರವಾಸಿಗರು ಇಳಿಯುವುದು ಹೆಚ್ಚಾಗಿದೆ. ಜಲಪಾತದ ಬಳಿ ಸಂಬಂಧಪಟ್ಟ ಅಧಿಕಾರಿಗಳು ಸೂಚನಾ ಫಲಕ ಅಳವಡಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಸಾಧನೆ ಶೂನ್ಯ, ಅವಹೇಳನಕಾರಿ ಮಾತಾಡ್ತಿದ್ದಾರೆ: ಡಿಕೆಶಿ ಕಿಡಿ