ಮೈಸೂರು: ಸೆಲ್ಫಿಗಾಗಿ ಇಬ್ಬರು ಯುವಕರು ದುಸ್ಸಾಹಸಕ್ಕೆ ಕೈ ಹಾಕಿದ ಘಟನೆ ಜಿಲ್ಲೆಯ ನಂಜನಗೂಡು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೊಸ ರೈಲ್ವೆ ಸೇತುವೆ ಬಳಿ ನಡೆದಿದೆ.
ಸೆಲ್ಫಿ ತೆಗೆದುಕೊಳ್ಳಲು ಜೀವವನ್ನೇ ಪಣಕ್ಕಿಟ್ಟಿದ್ದ ಇಬ್ಬರು ಯುವಕರು ಸೇತುವೆಯ ನಿಷೇಧಿತ ಸ್ಥಳಕ್ಕೆ ತಲುಪಿ ಅಪಾಯಕ್ಕೆ ಆಹ್ವಾನ ಒಡ್ಡಿದ್ದರು. ಸದ್ಯ ಯುವಕರು ಸೆಲ್ಫಿಗಾಗಿ ಸೇತುವೆಯ ಕೆಳಭಾಗಕ್ಕೆ ಇಳಿದು ಪೋಸ್ ಕೊಡುತ್ತಿರುವ ವಿಡಿಯೋ ಮೊಬೈಲ್ ಒಂದರಲ್ಲಿ ಸೆರೆಯಾಗಿದೆ.
ಕಬಿನಿ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆ ಮಾಡಿರುವುದರಿಂದ ಕಪಿಲೆ ಮೈದುಂಬಿ ಹರಿಯುತ್ತಿದ್ದಾಳೆ. ಪ್ರವಾಹದಂತೆ ರಭಸವಾಗಿ ಹರಿಯುತ್ತಿರುವ ವೇಳೆ ಯುವಕರು ಸೇತುವೆಯಿಂದ ಸುಮಾರು 15 ಅಡಿ ಕೆಳಕ್ಕೆ ಇಳಿದಿದ್ದಾರೆ. ಯುವಕರು ಇಳಿದಿರುವ ಸ್ಥಳ ನಿಷೇಧಿತ ಪ್ರದೇಶವಾಗಿದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಬಾಜಿ ಕಟ್ಟಿಕೊಂಡ ಯುವಕರು ಸೇತುವೆಯಿಂದ ಹಾರಿದ್ದ ಪ್ರಕರಣ ಇನ್ನೂ ಮಾಸುವ ಮೊದಲೇ ಯುವಕರ ದುಃಸ್ಸಾಹಸ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ಕಳಸ ಸಮೀಪದ ಅಂಬುತೀರ್ಥದಲ್ಲಿ ಸೆಲ್ಫಿ ತೆಗೆಯುವ ವೇಳೆ ಜುಲೈ 26 ರಂದು ಮಂಗಳೂರಿನ ಟೆಕ್ಕಿ ಕಿರಣ್ ಕೋಟ್ಯಾನ್, ಕಳಸ ಸಮೀಪದ ಅಂಬುತೀರ್ಥದಲ್ಲಿ ಸೆಲ್ಫಿ ತೆಗೆಯುವ ವೇಳೆ ಕಾಲುಜಾರಿ ಬಿದ್ದು, ನದಿಯಲ್ಲಿ ಕೊಚ್ಚಿಹೋಗಿದ್ದರು. ಕೊಚ್ಚಿಹೋಗಿದ್ದ ಕಿರಣ್ ಮೃತದೇಹ 15 ದಿನಗಳ ಬಳಿಕ ಮಾಗುಂಡಿ ಸಮೀಪದ ಭದ್ರಾ ನದಿಯಲ್ಲಿ ಪತ್ತೆಯಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews