ನವದೆಹಲಿ: ಕಳೆದ ಕೆಲ ದಿನಗಳ ಹಿಂದೆ ಕಳ್ಳತನ ಆರೋಪದಲ್ಲಿ ಸಾರ್ವಜನಿಕರಿಂದ ಹೊಡೆತ ತಿಂದು ಮೃತಪಟ್ಟ ಕೇರಳ ಆದಿವಾಸಿ ಮಧು ಕುಟುಂಬಕ್ಕೆ ಸೆಹ್ವಾಗ್ ಆರ್ಥಿಕ ಸಹಾಯ ನೀಡಿದ್ದಾರೆ.
ಸೆಹ್ವಾಗ್ ಫೌಂಡೇಶನ್ ಮೂಲಕ ಈಗಾಗಲೇ ಸಾಕಷ್ಟು ಸಹಾಯ ಕಾರ್ಯಗಳನ್ನು ಮಾಡುತ್ತಿರುವ ಸೆಹ್ವಾಗ್ ಈ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಸದ್ಯ ಸೆಹ್ವಾಗ್, ಮಧು ಅವರ ತಾಯಿಗೆ ಸಹಾಯ ಹಸ್ತ ನೀಡಲು ಮುಂದಾಗಿದ್ದಾರೆ. ಏಪ್ರಿಲ್ 11 ರಂದು ಕೇರಳದ ಅಟ್ಟಾಪಾಡಿಯಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮದ ವೇಳೆ ಮೃತ ಮಧು ಅವರ ತಾಯಿಗೆ ಸೆಹ್ವಾಗ್ ಫೌಂಡೇಶನ್ ನಿಂದ 1.50 ಲ್ಷ ರೂ. ಚೆಕ್ ವಿತರಣೆಯಾಗಲಿದೆ ಎಂದು ವರದಿಯಾಗಿದೆ.
ಸೆಹ್ವಾಗ್ ಚೆಕ್ ನೊಂದಿಗೆ ಮೃತ ಕುಟುಂಬದವರಿಗೆ ಸಂತಾಪ ಪತ್ರವನ್ನು ಬರೆದು ಧೈರ್ಯ ತುಂಬಿದ್ದಾರೆ. ಸದ್ಯ ಸೆಹ್ವಾಗ್ ಅವರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತಪಡಿವಾಗುತ್ತಿದೆ.
ಏನಿದು ಘಟನೆ: ಕೇರಳದ ಅಟ್ಟಪ್ಪಾಡಿಯಲ್ಲಿ ಹಸಿವಿನಿಂದ ಮಧು ಎಂಬ ಆದಿವಾಸಿ ಯುವಕ ಸ್ಥಳೀಯ ಅಂಗಡಿಯಿಂದ ಆಹಾರ ಕಳ್ಳತನ ಮಾಡಿದ್ದ. ಈ ವೇಳೆ ಮಾನಸಿಕ ಸಮಸ್ಯೆ ಎದುರಿಸುತ್ತಿದ್ದ ಆತನನ್ನು ಸ್ಥಳೀಯರು ಕಟ್ಟಿ ಹಾಕಿ ಥಳಿಸಿ ಸೆಲ್ಫಿ ತೆಗೆದುಕೊಂಡಿದ್ದರು. ಬಳಿಕ ಆತನನ್ನು ಪೊಲೀಸರು ಆಸ್ಪತ್ರೆಗೆ ಕರೆದುಕೊಂಡು ಹೋಗವ ವೇಳೆ ಆತ ಮೃತಪಟ್ಟಿದ್ದ.ಈ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.