ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ (Brij Bhushan Sharan Singh) ವಿರುದ್ಧ ಸಾಕ್ಷಿ ಹೇಳಲಿರುವ ಮಹಿಳಾ ಕುಸ್ತಿಪಟುಗಳ (Women Wrestlers) ಭದ್ರತೆಯನ್ನು ದೆಹಲಿ ಪೊಲೀಸರು ಹಿಂಪಡೆದಿದ್ದಾರೆ ಎಂದು ಒಲಿಂಪಿಯನ್ ವಿನೇಶ್ ಫೋಗಟ್ (Vinesh Phogat) ಗಂಭೀರ ಆರೋಪ ಮಾಡಿದ್ದಾರೆ.
जिन महिला पहलवानों की बृजभूषण के ख़िलाफ़ कोर्ट में गवाहियाँ होने वाली हैं, दिल्ली पुलिस ने उनकी सुरक्षा हटा ली है @DelhiPolice @DCWDelhi @NCWIndia
— Vinesh Phogat (@Phogat_Vinesh) August 22, 2024
ಹೌದು.. ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿ ಹೇಳಲು ಹೊರಟಿದ್ದ ಮಹಿಳಾ ಕುಸ್ತಿಪಟುಗಳ ಭದ್ರತೆಯನ್ನು ದೆಹಲಿ ಪೊಲೀಸರು (Delhi Police) ಹಿಂಪಡೆದಿದ್ದಾರೆ ಎಂದು ವಿನೇಶ್ ಆರೋಪಿಸಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಭದ್ರತೆಯನ್ನು ಹಿಂತೆಗೆದುಕೊಂಡಿರುದರಿಂದ ಕುಸ್ತಿಪಟುಗಳು ಸುರಕ್ಷಿತವಾಗಿ ನ್ಯಾಯಾಲಯದಲ್ಲಿ ಹಾಜರಾಗಲು ಹಾಗೂ ಸಾಕ್ಷ್ಯಗಳನ್ನು ನೀಡುವ ಅವರ ಸಾಮರ್ಥ್ಯದ ಮೇಲೆ ಪ್ರಭಾವ ಬೀರಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಆದ್ರೆ ವಿನೇಶ್ ಆರೋಪವನ್ನು ದೆಹಲಿ ಪೊಲೀಸರು ಅಲ್ಲಗಳೆದಿದ್ದಾರೆ.
ಇದಕ್ಕೂ ಮುನ್ನ ಕುಸ್ತಿಪಟುಗಳು ದೆಹಲಿ ನ್ಯಾಯಾಲಯ ಸಂಪರ್ಕಿಸಿದ್ದರು. ಬಳಿಕ ಕೋರ್ಟ್ ತಕ್ಷಣವೇ ಭದ್ರತಾ ಕವಚ ಮರುಸ್ಥಾಪಿಸುವಂತೆ ನಗರ ಪೊಲೀಸರಿಗೆ ಸೂಚಿಸಿತ್ತು. ಬಳಿಕ ಪ್ರತಿಕ್ರಿಯಿಸಿದ ದೆಹಲಿ ಪೊಲೀಸರು, ಕುಸ್ತಿಪಟುಗಳಿಗೆ ಒದಗಿಸಲಾದ ಭದ್ರತೆಯನ್ನು ಹಿಂತೆಗೆದುಕೊಂಡಿಲ್ಲ. ಭವಿಷ್ಯದಲ್ಲಿ ಜವಾಬ್ದಾರಿ ವಹಿಸಿಕೊಳ್ಳುವಂತೆ ಹರಿಯಾಣ ಪೊಲೀಸರಿಗೆ ವಿನಂತಿಸಲು ನಿರ್ಧರಿಸಲಾಗಿದೆ. ಆದ್ರೆ ನಿಯೋಜಿತ ದೆಹಲಿ ಪೊಲೀಸ್ ಪಿಎಸ್ಒಗಳು ಈ ನಿರ್ಧಾರವನ್ನು ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೆ. ಈ ಕಾರಣದಿಂದಾಗಿ ಗುರುವಾರ ವರದಿ ಮಾಡಲು ತಡಮಾಡಿದ್ದಾರೆ, ಗೊಂದಲವನ್ನು ಸರಿಪಡಿಸಿದ್ದೇವೆ ಎಂದು ತಿಳಿಸಿದರು.
ಹಿಂದೆ ಏನಾಗಿತ್ತು?
ಈ ಹಿಂದೆ ಕುಸ್ತಿ ಫೆಡರೇಷನ್ (Wrestling Federation of India) ಅಧ್ಯಕ್ಷರಾಗಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳು ಬಂದಿದ್ದರಿಂದ ದೂರು ದಾಖಲಾಗಿತ್ತು. ನಂತರ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಭಾರೀ ಪ್ರತಿಭಟನೆ ನಡೆದಿದ್ದವು. ಕುಸ್ತಿ ಪಟುಗಳಾದ ಸಾಕ್ಷಿ ಮಲಿಕ್, ವಿನೇಶ್ ಫೋಗಟ್, ಬಜರಂಗ್ ಪುನಿಯಾ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದವು. ಕೊನೆಗೆ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮಧ್ಯಪ್ರವೇಶಿಸಿ ಸಾಂಧಾನ ನಡೆಸಿದ ಬಳಿಕ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ವಾಪಸ್ ಪಡೆದಿದ್ದರು. ಈ ವರ್ಷಾರಂಭದಲ್ಲಿ ಬ್ರಿಜ್ ಭೂಷಣ್ ಅಧ್ಯಕ್ಷಗಿರಿಯಿಂದ ಕೆಳಗಿಳಿದಿದ್ದರು
ಇತ್ತೀಚೆಗೆ ಒಲಿಂಪಿಕ್ಸ್ ಫೈನಲ್ ತಲುಪಿ ವಿನೇಶ್ ಅನರ್ಹಗೊಂಡರು. ಭಾರತಕ್ಕೆ ಮರಳಿದ ಬಳಿಕ ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್ಐ) ವಿರುದ್ಧದ ನಮ್ಮ ಹೋರಾಟ ಮುಂದುವರಿಯಲಿದೆ. ಸತ್ಯವೇ ಮೇಲುಗೈ ಸಾಧಿಸುತ್ತದೆ ಎಂದು ಹೇಳಿದ್ದರು.