ಶ್ರೀನಗರ: ಅಮರನಾಥ ಯಾತ್ರೆ (Amarnath Yatra) ಗೆ ಭಯೋತ್ಪಾದಕರ ಕರಿನೆರಳ ಛಾಯೆ ಆವರಿಸಿದ್ದು, ಯಾತ್ರೆ ವೇಳೆ ಸೇನಾ ಪಡೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಸಾಧ್ಯತೆಗಳಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಈ ದಾಳಿಯ ನೇತೃತ್ವ ವಹಿಸಿಕೊಂಡಿದೆ ಎಂದು ಮೂಲಗಳು ಹೇಳಿವೆ.
ಯಾತ್ರೆಗೆ ಅಡ್ಡಿಪಡಿಸಲು ಭಯೋತ್ಪಾದಕರು ಭದ್ರತಾ ಪಡೆಗಳು (Security Forces) ಮತ್ತು ಅಮರನಾಥ ಯಾತ್ರೆ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಬಹುದು ಎನ್ನಲಾಗಿದ್ದು, ದಾಳಿಯ ಹೊಣೆಯನ್ನು ರಫೀಕ್ ನಾಯ್ ಮತ್ತು ಮೊಹಮ್ಮದ್ ಅಮೀನ್ ಬಟ್ ಅಲಿಯಾಸ್ ಅಬು ಖುಬೈಬ್ಗೆ ನೀಡಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಬಾಲಸೋರ್ ರೈಲು ಅಪಘಾತ – ತನಿಖೆ ಆರಂಭಿಸಿದ ಸಿಬಿಐ
ರಫೀಕ್ ನಾಯ್ ಮತ್ತು ಮೊಹಮ್ಮದ್ ಅಮೀನ್ ಬಟ್ ಇಬ್ಬರಿಗೂ ರಾಜೌರಿ-ಪೂಂಚ್, ಪಿರ್ ಪಂಜಾಲ್ ಮತ್ತು ಚೆನಾಬ್ ಕಣಿವೆ ಪ್ರದೇಶಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ಕಾರ್ಯವನ್ನು ನಿಯೋಜಿಸಲಾಗಿದೆ. ರಫೀಕ್ ನಾಯ್ ಪೂಂಚ್ ಜಿಲ್ಲೆಯ ಮೆಂಧರ್ ನಿವಾಸಿಯಾಗಿದ್ದರೆ, ಖುಬೈಬ್ ದೋಡಾ ಜಿಲ್ಲೆಯ ನಿವಾಸಿ. ಪ್ರಸ್ತುತ ಇಬ್ಬರೂ ಪಾಕ್ ಆಕ್ರಮಿತ ಕಾಶ್ಮೀರದಿಂದ (ಪಿಒಕೆ) ಕಾರ್ಯನಿರ್ವಹಿಸುತ್ತಿದ್ದಾರೆ.
ಮೂಲಗಳ ಪ್ರಕಾರ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜಮ್ಮು ಪ್ರದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುವ ಜವಬ್ದಾರಿಯನ್ನು ಇಬ್ಬರು ಭಯೋತ್ಪಾದಕರಿಗೆ ವಹಿಸಿದೆ. ಈ ಇಬ್ಬರೂ ಭಯೋತ್ಪಾದಕರು ಸಾಮಾಜಿಕ ಮಾಧ್ಯಮಗಳ ಮೂಲಕ ದೋಡಾ ಮತ್ತು ಪೂಂಚ್ (Poonch) ಪ್ರದೇಶದ ಯುವಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಗಡಿ ಪ್ರದೇಶಗಳ ಸುತ್ತಮುತ್ತ ಭದ್ರತಾ ಸಂಸ್ಥೆಗಳು ಕಟ್ಟೆಚ್ಚರ ವಹಿಸಿವೆ.
ಅಮರನಾಥ ಯಾತ್ರೆಗೂ ಮುನ್ನ ನಗರ ಮತ್ತು ಹಳ್ಳಿಯ ಪ್ರತಿಯೊಂದು ಭಾಗವನ್ನು ಭದ್ರತಾ ಪಡೆಗಳ ಮೇಲ್ವಿಚಾರಣೆ ಮಾಡುತ್ತಿವೆ. ಸ್ಕ್ವಾಡ್ ತಂಡಗಳು, ಕ್ಯೂಆರ್ಟಿ, ಸಿಆರ್ಪಿಎಫ್, ಜಮ್ಮು ಕಾಶ್ಮೀರ ಪೊಲೀಸ್, ಎಸ್ಎಸ್ಬಿ ಮತ್ತು ಇತರ ಹಲವು ಭದ್ರತಾ ಏಜೆನ್ಸಿಗಳು ಯಾತ್ರಿಗಳ ಸುರಕ್ಷತೆಯ ಜವಬ್ದಾರಿಯನ್ನು ಹೊತ್ತಿವೆ. ಅಮರನಾಥ ದೇಗುಲಕ್ಕೆ ಭೇಟಿ ನೀಡುವ ನೋಂದಣಿ ಪ್ರಕ್ರಿಯೆಯು 2023 ರ ಜುಲೈ 1 ರಿಂದ ಪ್ರಾರಂಭವಾಗಲಿದೆ. 62 ದಿನಗಳ ಯಾತ್ರೆಯ ಅವಧಿಯು 2023 ಆಗಸ್ಟ್ 31 ರಂದು ಮುಕ್ತಾಯಗೊಳ್ಳಲಿದೆ.