ನವದೆಹಲಿ: ಕೊರೊನಾ ವೈರಸ್ ನಂತರ ದೇಶದಲ್ಲಿ ಮತ್ತೆ ಭೀತಿ ಹುಟ್ಟಿಸಿರುವ ಹೆಚ್3ಎನ್2 (H3N2) ವೈರಸ್ ಮಾರ್ಚ್ ಅಂತ್ಯದ ವೇಳೆಗೆ ಇಳಿಕೆಯಾಗಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ (Union Health Ministry) ತಿಳಿಸಿದೆ.
ಇಂಟಿಗ್ರೇಟೆಡ್ ಡಿಸೀಸ್ ಸರ್ವೆಲೆನ್ಸ್ ಪ್ರೋಗ್ರಾಂ (IDSP) ನೆಟ್ವರ್ಕ್ ಮೂಲಕ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೆಚ್3ಎನ್2 ವೈರಸ್ ಪರಿಸ್ಥಿತಿಯನ್ನು ಅವಲೋಕಿಸಿ ಈ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: ಕೋವಿಡ್ ಬಳಿಕ ಏರಿಕೆಯಾಗಿದ್ದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಬೆಲೆ ಭಾರೀ ಇಳಿಕೆ
ದೇಶದಲ್ಲಿ ಹೆಚ್3ಎನ್2 ವೈರಸ್ಗೆ ಇಬ್ಬರು ಬಲಿಯಾಗಿದ್ದಾರೆ. ಅಲ್ಲದೇ ಸೋಂಕಿನ ಪ್ರಕರಣಗಳು ಹೆಚ್ಚಾಗಿ ಹರಡುತ್ತಿರುವುದರಿಂದ ಸಹಜವಾಗಿಯೇ ಜನರಲ್ಲಿ ಆತಂಕ ಮೂಡಿದೆ. 15 ವರ್ಷದ ಕೆಳಗಿನ ಮಕ್ಕಳು ಮತ್ತು 65 ವರ್ಷ ದಾಟಿದ ವೃದ್ಧರಿಗೆ ಈ ಸೋಂಕು ಸುಲಭವಾಗಿ ತಗುಲಬಹುದು. ಹೀಗಾಗಿ ಈ ವಯೋಮಾನದವರೆಲ್ಲ ಎಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕದ ಹಾಸನದಲ್ಲಿ 82 ವರ್ಷದ ವ್ಯಕ್ತಿಯೊಬ್ಬರು ಹೆಚ್3ಎನ್2ನಿಂದ ಮೃತಪಟ್ಟಿದ್ದು, ದೇಶದಲ್ಲೇ ಈ ಸೋಂಕಿಗೆ ಬಲಿಯಾದ ಮೊದಲ ವ್ಯಕ್ತಿಯಾಗಿದ್ದಾರೆ. ಹಿರೇಗೌಡ ಅವರನ್ನು ಫೆಬ್ರವರಿ 24 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾರ್ಚ್ 1 ರಂದು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರು ಮಧುಮೇಹಿ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರು ಎಂದು ವರದಿಯಾಗಿದೆ. ಇದನ್ನೂ ಓದಿ: H3N2ಗೆ ದೇಶದಲ್ಲಿ ಇಬ್ಬರು ಬಲಿ – ಕರ್ನಾಟಕ, ಹರಿಯಾಣದಲ್ಲಿ ಒಂದೊಂದು ಸಾವು
ಹೆಚ್3ಎನ್2 ಸೋಂಕಿನ ರೋಗ ಲಕ್ಷಣಗಳು: ಮೈ ಕೈ ನೋವು, ತೀವ್ರಶೀತ, ಜ್ವರ ಮತ್ತು ಕೆಮ್ಮು, ಉಸಿರಾಟದ ಸಮಸ್ಯೆ ಕಾಡಬಹುದು, ಜ್ವರ, ಕೆಮ್ಮು ಕಾಣಿಸಿಕೊಂಡ ಎರಡು ಮೂರು ದಿನಗಳ ಬಳಿಕ ಕಡಿಮೆಯಾಗಲಿದೆ. ಕೆಮ್ಮು ಮತ್ತು ಕಫ ಎರಡು ವಾರಗಳವರೆಗೂ ಇರಲಿದೆ.
ಈ ವೈರಾಣು ಬಗ್ಗೆ ಜನರು ಆತಂಕ ಪಡುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮ ವಹಿಸುವುದು ಅಗತ್ಯ ಎಂದು ತಜ್ಞರು ತಿಳಿಸಿದ್ದಾರೆ.