ಗದಗ: ಕಪ್ಪತ್ತಗುಡ್ಡ ರಕ್ಷಿಸುವಂತೆ ಹೋರಾಟಗಳು ನಡೆದಿರುವಾಗಲೇ ಕಪ್ಪತ್ತಗುಡ್ಡಕ್ಕೆ ಕನ್ನ ಹಾಕಲು ಬಹುರಾಷ್ಟ್ರೀಯ ಕಂಪನಿಗಳು ಸಂಚು ಹಾಕಿರುವ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಸೊರಟೂರು, ವೆಂಕಟಾಪೂರಕ್ಕೆ ಹೊಂದಿಕೊಂಡಂತೆ ಇರುವ ಗುಡ್ಡದ ಬಳಿ ಕೇಂದ್ರ ಸರ್ಕಾರದ ಭೂಗರ್ಭ ಶಾಸ್ತ್ರ ಇಲಾಖೆ ಹಾಗೂ ಆಸ್ಟ್ರೇಲಿಯಾ ಮೂಲದ ಕಂಪನಿಯ ಪ್ರತಿನಿಧಿಗಳು ಅದಿರು ನಿಕ್ಷೇಪ ಶೋಧ ಕಾರ್ಯಾಚರಣೆ ಮಾಡಿದ್ದಾರೆ. ಜಿಲ್ಲಾಡಳಿತಕ್ಕೂ ಮಾಹಿತಿ ನೀಡದೇ 30ಕ್ಕೂ ಹೆಚ್ಚ ಅಧಿಕಾರಿಗಳ ತಂಡ ಆಗಮಿಸಿ ಅದಿರು ನಿಕ್ಷೇಪ ಶೋಧ ಮಾಡಿರುವುದು ಇದೀಗ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಕಪ್ಪತ್ತಗುಡ್ಡವನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸಬೇಕು ಅನ್ನೋ ಕೂಗು ಕೇಳಿಬರುವಾಗಲೇ ಅದಿರು ಶೋಧ ಕಾರ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಲ್ದೋಟಾ ಕಂಪನಿಗೆ ಅನುಕೂಲ ಮಾಡಿಕೊಡಲು ಅದಿರು ನಿಕ್ಷೇಪ ಶೋಧ ಕಾರ್ಯ ನಡೆಸಿದ್ದಾರೆ ಅಂತಾ ಜನರು ಸಂಶಯ ವ್ಯಕ್ತಪಡಿಸಿದ್ದಾರೆ.
ಗಣಿಗಾರಿಕೆ ಸೇರಿದಂತೆ ಹಲವು ವ್ಯವಹಾರಗಳಲ್ಲಿ ಬಲ್ಡೊಟ ಕಂಪನಿ ಆಸ್ಟ್ರೇಲಿಯಾ ಕಂಪನಿ ಜೊತೆ ಪಾಲುಗಾರಿಕೆ ಹೊಂದಿರುವ ಮಾಹಿತಿಯಿದೆ. ಕಳೆದ ಭಾನುವಾರವೇ ಈ ಅಧಿಕಾರಿಗಳ ತಂಡ ಶೋಧ ಮಾಡಿದ್ದು, ತಡವಾಗಿ ವಿಚಾರ ಬೆಳಕಿಗೆ ಬಂದಿದೆ. ಕೇಂದ್ರ ಸರ್ಕಾರವು ಬಲ್ದೋಟ ಕಂಪನಿ ಪರ ಇದೆ ಅಂತಾ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ.