ರಾಮನಗರ: ಶಿವರಾತ್ರಿ ಜಾತ್ರಾಮಹೋತ್ಸವ ಹಿನ್ನೆಲೆ ಮಲೆ ಮಹದೇಶ್ವರ ಬೆಟ್ಟಕ್ಕೆ (Male Mahadeshwara Hills) ಸಾವಿರಾರು ಭಕ್ತರು ಪಾದಯಾತ್ರೆ ಹಮ್ಮಿಕೊಂಡಿದ್ದು, ಕನಕಪುರ ತಾಲೂಕಿನ ಸಂಗಮ ಅರಣ್ಯ ಪ್ರದೇಶದ ಕಾವೇರಿ ನದಿ ದಾಟಿ ಎರಡನೇ ದಿನವೂ ಪಾದಯಾತ್ರೆ ಆರಂಭಿಸಿದ್ದಾರೆ.
ಬೆಂಗಳೂರು, ತುಮಕೂರು, ಕೋಲಾರ ಹಾಗೂ ರಾಮನಗರ ಜಿಲ್ಲೆಯ ಸಾವಿರಾರು ಮಂದಿ ಕಾವೇರಿ ನದಿ ದಾಟಿ ಮಾದಪ್ಪನ ದರ್ಶನಕ್ಕೆ ತೆರಳುತ್ತಿದ್ದು, ತಾಲೂಕು ಆಡಳಿತ ಮುಂಜಾಗ್ರತಾ ಕ್ರಮವಹಿಸಿದೆ. ಪಾದಯಾತ್ರೆ ಮಾಡುವ ಭಕ್ತರು ಬೆಳಗ್ಗೆ 7 ರಿಂದ ಸಂಜೆ 6ರ ವರೆಗೆ ಮಾತ್ರ ಅರಣ್ಯ ಪ್ರದೇಶದಲ್ಲಿ ಪಾದಯಾತ್ರೆಗೆ ಅವಕಾಶ ನೀಡಲಾಗಿದ್ದು, ನಾಳೆ ಸಂಜೆವರೆಗೂ ಮಾತ್ರ ಪಾದಯಾತ್ರೆಗೆ ಅನುವು ಮಾಡಿಕೊಡಲಾಗಿದೆ. ಇದನ್ನೂ ಓದಿ: ಪಾದಯಾತ್ರೆ ಹೋಗ್ತಿದ್ದ ಬಾಲಕನ ಮೇಲೆ ಚಿರತೆ ದಾಳಿ – ಆತಂಕದ ನಡುವೆ ಭಕ್ತರ ಕಾಲ್ನಡಿಗೆ!
ಎಸ್ಡಿಆರ್ಎಫ್ ತಂಡ, ಅಗ್ನಿಶಾಮಕ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟು ಭಕ್ತರನ್ನ ಸುರಕ್ಷಿತವಾಗಿ ನದಿ ದಾಟಿಸಿ, ಅರಣ್ಯ ಪ್ರದೇಶದಲ್ಲೂ ಭದ್ರತೆ ಒದಗಿಸಿದ್ದಾರೆ. ಪಾದಯಾತ್ರೆ ಮಾಡುವ ಭಕ್ತರಿಗೆ ಸುತ್ತಮುತ್ತಲ ಗ್ರಾಮಸ್ಥರು ಊಟ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಿದ್ದು ಸಾವಿರಾರು ಸಂಖ್ಯೆಯಲ್ಲಿ ಮಾದಪ್ಪನ ಭಕ್ತರು ಪಾದಯಾತ್ರೆ ಮುಂದುವರೆಸಿದ್ದಾರೆ.

