ಕಾರವಾರ: ಶಿವಮೊಗ್ಗ (Shivamogga) ಜಿಲ್ಲೆಯಲ್ಲಿ ಉಗ್ರರ (Terrorist) ಕಾರ್ಯ ಬಯಲಾಗುತಿದ್ದಂತೆ ಇದರ ಬೇರು ಶಿರಸಿಗೂ ತಾಕಿದೆ. ಇಂದು ಮುಂಜಾನೆ ಶಿರಸಿಯ ಟಿಪ್ಪು ನಗರದಲ್ಲಿರುವ ಎಸ್ಡಿಪಿಐ (SDPI) ಮುಖಂಡನ ಮನೆಯ ಮೇಲೆ ರಾಷ್ಟ್ರೀಯ ತನಿಖಾ ದಳದ (NIA) ಅಧಿಕಾರಿಗಳು ದಾಳಿ ನಡೆಸಿದ್ದು, ಎಸ್ಡಿಪಿಐ ಮುಖಂಡ ಅಜೂಜ್ ಅಬ್ದುಲ್ ಶುಕುರ್ ಹೊನ್ನಾವರ್ನನ್ನು(45) ವಶಕ್ಕೆ ಪಡೆದಿದ್ದಾರೆ.
ಈತನ ಸಹೋದರ ಪಿಎಫ್ಐ (PFI) ನಲ್ಲಿ ಪ್ರಾಂತೀಯ ಅಧ್ಯಕ್ಷನಾಗಿದ್ದು ಮೌಸಿನ್ ಅಬ್ದುಲ್ ಶಕೂರ್ ಎಂಬಾತನ ಮನೆಯ ಮೇಲೂ ದಾಳಿ ನಡೆದಿದೆ. ಆದರೆ ಈತ ಮನೆಯಲ್ಲಿ ಇರದ ಕಾರಣ ಅಧಿಕಾರಿಗಳು ಮರಳಿದ್ದಾರೆ. ಬಂಧಿತ ಅಜೂಜ್ ಅಬ್ದುಲ್ ಶುಕುರ್ ನಿಂದ ಒಂದು ಲ್ಯಾಪ್ ಟಾಪ್ (Laptop), ಎರಡು ಮೊಬೈಲ್ (Mobile), ಒಂದು ಪುಸ್ತಕ ಹಾಗೂ ಒಂದು ಸಿಡಿ ಜಪ್ತಿ ಮಾಡಿಕೊಳ್ಳಲಾಗಿದ್ದು ಬಿಗಿ ಪೊಲೀಸ್ (Police) ಬಂದೋಬಸ್ತ್ ನಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ಶಿವಮೊಗ್ಗದಲ್ಲಿ ನಿನ್ನೆ ರಾತ್ರಿ ಬಂಧಿತ ಪಿಐಫ್ಐ (PFI) ಸದಸ್ಯರು ಹಾಗೂ ಉಗ್ರನ ಬಂಧಿಸಿದ ವೇಳೆ ಶಿರಸಿಯ ಪಿಎಫ್ಐ ಮುಖಂಡರ ಹೆಸರು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸ್ಥಳೀಯ ಪೊಲೀಸರ ಸಹಾಯದಿಂದ ಕೇಂದ್ರ ಗುಪ್ತದಳ ವಿಭಾಗದ ಅಧಿಕಾರಿಗಳು, ಎನ್ಐಎ ಅಧಿಕಾರಿಗಳು ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಇಂದು ಮುಂಜಾನೆ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.