ಗದಗ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಳೇ 500 ರೂ. ಹಾಗೂ 1 ಸಾವಿರ ರೂ. ಮುಖಬೆಲೆಯ ನೋಟ್ ಬ್ಯಾನ್ ಮಾಡಿ ಒಂದು ವರ್ಷವೇ ಕಳೆದರೂ ಹಳೆ ನೋಟ್ಗಳ ಬದಲಾವಣೆ ಮಾಡುವ ಮಾಫಿಯಾ ಇನ್ನೂ ಕಾರ್ಯಾಚರಣೆ ನಡೆಸುತ್ತಲೇ ಇದೆ. ಇದಕ್ಕೆ ತಾಜಾ ಉದಾರಣೆ ಎಂಬಂತೆ ಗದಗ ನಗರದಲ್ಲಿ ಹಳೇ ನೋಟ್ ಗಳನ್ನು ಆಕ್ರಮವಾಗಿ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.
ಬಂಧಿತರಲ್ಲಿ ಇಬ್ಬರು ಗದಗ ನಗರ ನಿವಾಸಿಗಳಾಗಿದ್ದು ಮತ್ತಿಬ್ಬರು ಗದಗ ತಾಲೂಕಿನ ನಾಗಾವಿ ಮತ್ತು ಮಲ್ಲಸಮುದ್ರ ಗ್ರಾಮದ ನಿವಾಸಿಗಳಾಗಿದ್ದಾರೆ. ಗದಗ ರಾಧಾಕೃಷ್ಣ ನಗರದ ಮಾಬುಸುಬಾನಿ ಸವಡಿ(40), ನಗರದ ಗಂಗಿಮಡಿ ಕಾಲೋನಿ ನಿವಾಸಿ ಮಹಮದ್ ಯುಷುಫ್ ಗುಳಗುಂದಿ (26) ಹಾಗೂ ತಾಲೂಕಿನ ಮಲ್ಲಸಮುದ್ರ ಗ್ರಾಮದ ಸುರೇಶ್ ಹಳ್ಳಿಕೇರಿ(45), ನಾಗಾವಿ ಗ್ರಾಮದ ಮುತ್ತಪ್ಪ ಮಲ್ಲಮ್ಮ ನವರ್ (36) ಬಂಧಿತ ಆರೋಪಿಗಳು.
ಹಳೇ ನೋಟುಗಳನ್ನು ಸಾಗಣೆ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಮೇರೆಗೆ ಗದಗ ಬೆಟಗೇರಿ ಬಡಾವಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ನಗರದ ರೈಲ್ವೇ ಕ್ವಾಟ್ರಸ್ ಬಳಿ ಬೈಕ್ ಮೇಲೆ ಹಣ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಸುಮಾರು 12 ಲಕ್ಷ ರೂ. ಮೌಲ್ಯದ ಹಳೇ ನೋಟ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳನ್ನು ಪೋಲಿಸರು ಬಂಧಿಸಿದ ನಂತರ ಸಾರ್ವಜನಿಕರಲ್ಲಿ ಹಲವು ಅನುಮಾನಗಳು ಮೂಡಿದೆ. ಈ ಹಣ ಯಾರದ್ದು? ಹಳೇ ನೋಟುಗಳನ್ನ ಇನ್ನೂ ಎಕ್ಸ್ಚೆಂಜ್ ಮಾಡುವ ಕುಳಗಳು ಯಾರು? ಬ್ಲಾಕ್ ಮನಿ ವೈಟ್ ಮನಿ ಮಾಡೊಕೆ ಸಜ್ಜಾಗಿದ್ದಾರಾ ಕಪ್ಪು ಕುಳಗಳು? ಆ ಹಳೇನೋಟನ್ನು ಈಗಲೂ ಸ್ವೀಕರಿಸ್ತಾರೆ ಅಂದರೆ ಅದರ ಹಿಂದಿರುವ ಕೈವಾಡವಾದರು ಎಂತಹದ್ದು? ಈ ಎಲ್ಲಾ ಪ್ರಶ್ನೆಗಳಿಗೆ ಪೊಲೀಸ್ ವಿಚಾರಣೆ ನಂತರವಷ್ಟೇ ಉತ್ತರ ಸಿಗಲಿದೆ.