ಚಿಕ್ಕಮಗಳೂರು: ಹಾಸನದಿಂದ ಮಂಗಳೂರಿಗೆ ಹೋಗುತ್ತಿದ್ದ ಸ್ಕಾರ್ಪಿಯೋ ಕಾರು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಬಳಿ 400 ಅಡಿ ಆಳದ ಕಂದಕಕ್ಕೆ ಬಿದ್ದಿದೆ. ಆದ್ರೆ ಅದೃಷ್ಟವಶಾತ್ ಕಾರಿನಲ್ಲಿದ್ದ ಸುಳ್ಯ ಮೂಲದ ಗುರು ಹಾಗೂ ಬೆಳ್ತಂಗಡಿ ಮೂಲದ ಲೋಹಿತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರನ್ನೂ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾರು 400 ಅಡಿಯ ಪ್ರಪಾತಕ್ಕೆ ಬೀಳಲು ಮಳೆ ಹಾಗೂ ದಟ್ಟವಾದ ಮಂಜು ಕವಿದಿದ್ದೇ ಕಾರಣ ಎಂದು ಅಂದಾಜಿಸಲಾಗಿದೆ. 400 ಅಡಿಯ ಪ್ರಪಾತಕ್ಕೆ ಬಿದ್ದ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ. ಇಂತಹ ಜಾಗದಲ್ಲಿ ಬಿದ್ರೂ ಪ್ರಯಾಣಿಕರು ಬದುಕಿರೋದು ಪವಾಡವೇ ಸರಿ.
ಇದೀಗ ಸ್ಥಳಕ್ಕೆ ಆಗಮಿಸಿರೋ ಮೂಡಿಗೆರೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರನ್ನ ಮೇಲೆತ್ತಲು ಹರಸಾಹಸ ಪಡ್ತಿದ್ದಾರೆ. ಮಂಗಳೂರಿನಿಂದ ಅಥವಾ ಹಾಸನದಿಂದ ಬರಲಿರುವ ದೊಡ್ಡ ಕ್ರೇನ್ಗಾಗಿ ಕಾಯುತ್ತಿದ್ದಾರೆ.