ರಾಮನಗರ: ಚಲಿಸುತ್ತಿದ್ದ ಸ್ಕಾರ್ಪಿಯೋ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಸಂಪೂರ್ಣವಾಗಿ ಸುಟ್ಟು ಹೋದ ಘಟನೆ ಜಿಲ್ಲೆಯ ಮದರ್ ಸಾಬರದೊಡ್ಡಿ ಗ್ರಾಮದ ಬಳಿ ನಡೆದಿದೆ.
ಸ್ಕಾರ್ಪಿಯೋ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಸ್ಕಾರ್ಪಿಯೋ ವಾಹನವು ಬೆಂಗಳೂರಿನ ಮೂಲದವರೆಂದು ಹೇಳಲಾಗುತ್ತಿದ್ದು, ಚಲಿಸುವಾಗಲೇ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾರ್ ಚಲಿಸುತ್ತಿದ್ದಾಗ ಇಂಜಿನ್ ನಿಂದ ಮೊದಲು ಬೆಂಕಿಕಾಣಿಸಿಕೊಂಡಿದೆ. ಇದರಿಂದ ಅನುಮಾನಗೊಂಡ ಚಾಲಕ ಕೂಡಲೇ ಕಾರನ್ನು ನಿಲ್ಲಿಸಿದ್ದಾರೆ.
ಕಾರಿನ ಬ್ಯಾನೆಟ್ ತೆಗೆದು ನೋಡಿದಾಗ ಬೆಂಕಿ ಕಂಡು ಬಂದಿದೆ. ಕೂಡಲೇ ಕಾರಿನಲ್ಲಿದ್ದ ನಾಲ್ವರು ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಕಿ ವ್ಯಾಪಕವಾಗಿ ಆವರಿಸಿಕೊಂಡ ಹಿನ್ನೆಲೆಯಲ್ಲಿ ಸ್ಕಾರ್ಪಿಯೋ ಕಾರ್ ಸಂಪೂರ್ಣ ಸುಟ್ಟು ಹೋಗಿದೆ.
ಘಟನೆ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.