ಬೆಂಗಳೂರು: ರಾಜ್ಯದಲ್ಲಿ ನಾಳೆಯಿಂದ ಎರಡನೇ ಹಂತದ ಶಾಲೆಗಳು ಆರಂಭವಾಗಲಿವೆ. ಆರನೇ ತರಗತಿಯಿಂದ ಎಂಟನೇ ತರಗತಿಯವರೆಗೂ ಶಾಲೆಗಳು ನಾಳೆಯಿಂದ ಶುರುವಾಗಲಿವೆ.
ಈ ಹಿನ್ನೆಲೆಯಲ್ಲಿ ಕೋವಿಡ್ ನಿಯಮಗಳ ಪಾಲನೆ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಶಾಲೆ ಓಪನ್ ಸಿದ್ಧತೆಗಳ ಬಗ್ಗೆ ಇಂದು ನಡೆದ ಸಭೆಯಲ್ಲಿ ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳಿಂದ ಸಿಎಂ ಬಸವರಾಜ ಬೊಮ್ಮಾಯಿ ಮಾಹಿತಿ ಪಡೆದುಕೊಂಡರು. ಈ ವೇಳೆ, ಈಗಾಗಲೇ ನಡೆಯುತ್ತಿರುವ ತರಗತಿಗಳಿಂದ ಯಾವುದೇ ತೆರನಾದ ಸಮಸ್ಯೆ ಉಂಟಾಗಿಲ್ಲ ಎಂಬ ವಿಚಾರವನ್ನು ಸಿಎಂ ಗಮನಕ್ಕೆ ಶಿಕ್ಷಣ ಮಂತ್ರಿಗಳು ತಂದರು. ಇದನ್ನೂ ಓದಿ: ಪೋಷಕರು 1ನೇ ತರಗತಿಯಿಂದಲೇ ಶಾಲೆ ಆರಂಭಿಸಲು ಹೇಳ್ತಿದ್ದಾರೆ : ಬಿ.ಸಿ.ನಾಗೇಶ್
ನಾಳೆಯಿಂದ ಆರಂಭವಾಗಲಿರುವ ತರಗತಿಗಳ ಬಗ್ಗೆ ಮುಂದಿನ ವಾರ ವರದಿ ನೀಡಲು ಸೂಚಿಸಿದ್ದು, ಈ ವರದಿ ಆಧಾರದ ಮೇಲೆ ಪ್ರಾಥಮಿಕ ಶಾಲೆ ತೆರೆಯುವ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ನಾಳೆ ಶಾಲೆ ಓಪನ್ ಆಗಲಿರುವ ಹಿನ್ನೆಲೆಯಲ್ಲಿ ಎಲ್ಲಾ ಕಡೆ ಶುಚಿತ್ವದ ಕೆಲಸಗಳು ಭರದಿಂದ ಸಾಗಿದೆ. ಇದನ್ನೂ ಓದಿ: ಸರ್ಕಾರಿ ಶಾಲೆ ವಿದ್ಯಾರ್ಥಿಗಳನ್ನು ಆಕರ್ಷಿಸಲು ಗೋಡೆ ಮೇಲೆ ನಿರ್ಮಾಣವಾಯ್ತು ಉಗಿಬಂಡಿ
ನಿಯಮ ಏನು?
ನಾಳೆಯಿಂದ 6, 7, 8ನೇ ತರಗತಿಗೆ ಶಾಲೆ ಆರಂಭ. ವಿದ್ಯಾರ್ಥಿಗಳು ಶಾಲೆಗೆ ಬರುವುದು ಕಡ್ಡಾಯ ಇಲ್ಲ. ಆನ್ಲೈನ್ ಅಥವಾ ಆಫ್ಲೈನ್ ಹಾಜರಾತಿ ಕಡ್ಡಾಯ. ಶಾಲೆಗೆ ಬರಲು ಪೋಷಕರ ಅನುಮತಿ ಪತ್ರ ಕಡ್ಡಾಯ. ಶೇಕಡಾ 50ರಷ್ಟು ಮಕ್ಕಳೊಂದಿಗೆ ದಿನಬಿಟ್ಟು ದಿನ ತರಗತಿ. 6,7,8ನೇ ತರಗತಿಗೆ ಬೆಳಗ್ಗೆ. 10-1.30ರವರೆಗೆ ತರಗತಿ. ಸೋಮವಾರದಿಂದ ಶುಕ್ರವಾರದವರೆಗೆ ಕ್ಲಾಸ್. ಶಾಲೆ ಸ್ವಚ್ಛತೆಗಾಗಿ ಶನಿವಾರ ಶಾಲೆಗೆ ರಜೆ (ಎಂದಿನಂತೆ ಭಾನುವಾರ ರಜೆ) ಪಾಸಿಟಿವಿಟಿ ದರ ಶೇ.2ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಶಾಲೆ ಇಲ್ಲ.