ತುಮಕೂರು: ರಾಜ್ಯದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಸ್ವಕ್ಷೇತ್ರದಲ್ಲಿ ಶಾಲೆಯೊಂದು ಸೂರಿಲ್ಲದೇ ಮಕ್ಕಳ ದಿನನಿತ್ಯದ ಯಾತನೆಗೆ ಕಾರಣವಾಗಿದೆ.
ಕೊರಟಗೆರೆ ತಾಲೂಕಿನ ಬೋಡಬಂಡೇನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಸ್ಥಿತಿ ನಿರ್ಮಾಣವಾಗಿದೆ. ಶಾಲೆಯ ಕಟ್ಟಡ ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿದೆ. ಸರಿಯಾದ ಸೂರಿಲ್ಲದೇ ಗಾಳಿ, ಮಳೆ, ಬಿಸಿಲಿನಲ್ಲೇ ಮಕ್ಕಳು ಕುಳಿತು ಪಾಠ ಕೇಳುತ್ತಿದ್ದಾರೆ. ಅದರಲ್ಲೇ ಸುಮಾರು 26 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಠ ಕಲಿಯುತಿದ್ದಾರೆ.
ಶಿಕ್ಷಕರು ಕುಳಿತುಕೊಳ್ಳೋದಕ್ಕೆ ಒಂದು ಕುರ್ಚಿ ಸಹ ಶಾಲೆಯಲ್ಲಿ ಇಲ್ಲದಂತಾಗಿದೆ. ಸುತ್ತಲಿನ ಐದಾರು ಹಳ್ಳಿಗಳ ಮಕ್ಕಳಿಗೆ ಈ ಶಾಲೆ ಆಸರೆಯಾಗಿದ್ದು, ಶಾಲೆಯ ಸ್ಥಿತಿ ನೋಡಿ ಪೋಷಕರು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ.
ಕಳೆದ ಮೂರು ವರ್ಷಗಳಿಂದ ದಿನನಿತ್ಯ ಮಕ್ಕಳು ಈ ಶಾಲೆಯಲ್ಲಿ ಜೀವ ಬಿಗಿಹಿಡಿದುಕೊಂಡು ಪಾಠ ಕೇಳುತ್ತಿದ್ದಾರೆ. ತನ್ನ ಕ್ಷೇತ್ರವನ್ನ ಮಾದರಿ ಕ್ಷೇತ್ರವಾಗಿ ಮಾಡುತ್ತೀನಿ ಅಂದಿದ್ದ ಡಾ.ಜಿ. ಪರಮೇಶ್ವರ್ ಅವರಿ ಉಪಮುಖ್ಯಮಂತ್ರಿಯಾದರೂ ಈ ಶಾಲೆ ಹಾಗೆಯೇ ಇದೆ. ಇನ್ನಾದರೂ ಈ ಶಾಲೆಗೆ ಕಾಯಕಲ್ಪ ಸಿಗುತ್ತಾ ಅಂತಾ ಊರಿನ ಜನರು ಕಾದು ನೋಡುತ್ತಿದ್ದಾರೆ.