ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕು ಹೋತನಹಳ್ಳಿ ಗ್ರಾಮದಲ್ಲಿ ಅರಳೇಶ್ವರ ಕ್ಲಸ್ಟರ್ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ ಕಾರ್ಯಕ್ರಮವನ್ನ ಆಚರಿಸಲಾಯಿತು.
ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ವಿಜ್ಞಾನ ಕಾರ್ಯಕ್ರಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀನಿವಾಸ್ ಹೆಚ್. ಕಾರ್ಯಕ್ರಮ ಉದ್ಘಾಟಿಸಿ ಮಕ್ಕಳು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡು ಭಾರತವನ್ನು ಭವ್ಯ ಭಾರತವಾಗಿ ನಿರ್ಮಾಣ ಮಾಡಬೇಕೆಂದು ಕರೆ ಕೊಟ್ಟರು. ಪ್ರತಿಯೊಂದು ವಿಷಯವನ್ನು ಏನು, ಏಕೆ, ಹೇಗೆ ಎಂದು ವಿಮರ್ಶಿಸಿ ತೀರ್ಮಾನ ತೆಗೆದುಕೊಳ್ಳಬೇಕೆಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಬಿ.ಎಂ. ಬೇವಿನಮರದ ಮಾತನಾಡಿ, ಮಕ್ಕಳು ವೈಚಾರಿಕ ಮನೋಭಾವನೆಯನ್ನು ಬೆಳೆಸಿಕೊಂಡು ಮೂಢನಂಬಿಕೆಗಳನ್ನು ದೂರೀಕರಿಸಿ ಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಕ್ಕಳ ವಿಜ್ಞಾನ ಹಬ್ಬ ಕಾರ್ಯಾಗಾರದಲ್ಲಿ ಕ್ಲಸ್ಟರ್ 150 ಮಕ್ಕಳು ಭಾಗವಹಿಸಿದ್ದರು. ಮಕ್ಕಳಿಗೆ ಬೆಳಕಿನ ಆಚರಣೆಯ ಚಟುವಟಿಕೆ ಜೀವಜಾಲ, ತ್ರೀಡಿ ಚಾಲಿಸ ರಚನೆ, ಸ್ಪ್ರಿಂಗ್ ಚಟುವಟಿಕೆ, ಕತೆ ಕಟ್ಟುವುದು ಓರಿಗಾಮಿ, ಓಡುವ ಜಿಂಕೆ, ಮುಖವಾಡ ರಚನೆ, ಈಜುವ ಮೀನು, ವೈಜ್ಞಾನಿಕ ಆಟಗಳು ಮುಂತಾದ ಚಟುವಟಿಕೆಗಳನ್ನು ಹೇಳಿಕೊಡಲಾಯಿತು. ಗಣೇಶ ಹೆಗಡೆ ಅವರು ಸರಳ ಪ್ರಯೋಗಗಳನ್ನು ಮಕ್ಕಳಿಗೆ ಮನಮುಟ್ಟುವಂತೆ ತೋರಿಸಿದರು. ಶ್ರೀನಿವಾಸ್ ರವರು ಮಕ್ಕಳಿಗೆ ದಿನನಿತ್ಯ ಜೀವನದಲ್ಲಿ ವಿಜ್ಞಾನದ ಕುರಿತು ತಿಳಿಹೇಳಿದರು.
ನಲಿಕಲಿ ಮಕ್ಕಳಿಗೆ ಅನಿಲ್ ಸಣ್ಣಮನಿ, ರಾಮಚಂದ್ರ ಹಿತ್ತಲಮನಿ 60 ಕುರ್ಚಿಗಳನ್ನು ನೀಡಿದರು. ಎಸ್ಡಿಎಂಸಿ ಅಧ್ಯಕ್ಷರಾದ ಕಲ್ಲನಗೌಡ ಕಳ್ಳಿಮನಿ ತಾಲೂಕು ಪಂಚಾಯಿತಿ ಸದಸ್ಯರಾದ ಶ್ರೀಮತಿ ಸುಮಂಗಳ ಕನ್ನಕ್ಕನವರ್, ದಯಾನಂದ ಕನ್ನಕ್ಕನವರ್, ಊರಿನ ಹಿರಿಯರು ಜನಪ್ರತಿನಿಧಿಗಳು ಭಾಗವಹಿಸಿದ್ದರು. ಎಸ್ಡಿಎಂಸಿ ಸದಸ್ಯರು, ಗ್ರಾಮ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು.
ಕ್ಲಸ್ಟರ್ ಸಂಪನ್ಮೂಲ ವ್ಯಕಿ ಮೌನೇಶ್ವರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿಜ್ಞಾನ ಹಬ್ಬವನ್ನು ಆಚರಿಸುವ ಮಹತ್ವವನ್ನು ತಿಳಿಸಿದರು. ಶಾಲೆಯ ಪ್ರಧಾನ ಗುರುಗಳಾದ ಶ್ರೀನಿವಾಸ ದೀಕ್ಷಿತ್ ಅವರು ಕಾರ್ಯಕ್ರಮ ನಿರೂಪಿಸಿದರು.