ಬೀದರ್: ಕಲ್ಯಾಣ ಕರ್ನಾಟಕದಲ್ಲಿ ಶಾಲೆ ಆರಂಭವಾದ ಬಳಿಕ ಮಕ್ಕಳ ಹಾಜರಾತಿ ಕಡಿಮೆ ಇದ್ದು, ಮಕ್ಕಳನ್ನು ಶಾಲೆಗೆ ಕರೆತರುವ ಕೆಲಸವನ್ನು ಸ್ಥಳೀಯ ಶಿಕ್ಷಣಾಧಿಕಾರಿಗಳಿಗೆ ಮಾಡಲು ಸೂಚನೆ ನೀಡಿದ್ದೇನೆ ಎಂದು ಭಾಲ್ಕಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ.
ಇಂದು ಭಾಲ್ಕಿ ಪ್ರವಾಸ ಕೈಗೊಂಡಿದ್ದ ವೇಳೆ ಮಾಧ್ಯಮಗಳೊಂದಿದೆ ಮಾತನಾಡಿದ ಸಚಿವರು, ಈಗಾಗಲೇ ರಾಜ್ಯದಲ್ಲಿ 1 ರಿಂದ 5 ನೇ ತರಗತಿಗಳು ಪ್ರಾರಂಭವಾಗಿದ್ದು, ಎಲ್ಲಾ ಶಾಲೆಗಳಲ್ಲಿ ಮೊದಲ ದಿನಕ್ಕಿಂತ ಸದ್ಯ ಹಾಜರಾತಿ ಜಾಸ್ತಿಯಾಗಿದೆ. ಆದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾತ್ರ ಮಕ್ಕಳ ಹಾಜರಾತಿ ಸ್ವಲ್ಪ ಕಡಿಮೆ ಇದ್ದು ಒಂದೂವರೆ ವರ್ಷದಿಂದ ಯಾವ ಕೊರತೆ ಇತ್ತು ಅದನ್ನು ನಿಗಿಸುವ ಕೆಲಸ ಮಾಡುತ್ತೇವೆ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ಇಂದಿರಾ ಗಾಂಧಿಯನ್ನು ಏಕವಚನದಲ್ಲಿ ಬೈಯ್ದಿದ್ದಾರೆ – ಸಿದ್ದುಗೆ ಕಟೀಲ್ ಸವಾಲು
ಕೊರೊನಾ ಹೊಸ ತಳಿಯ ಸೋಂಕು ಪತ್ತೆ ವಿಚಾರವಾಗಿ ಪ್ರತಿಕ್ರಿಯಿಸಿ, ಆಕಸ್ಮಿಕವಾಗಿ ಹೊಸ ತಳಿಯ ಕೊರೊನಾ ಪತ್ತೆಯಾದರೆ ಕೇಂದ್ರ ಸರ್ಕಾರ ಕೂಡಲೇ ಗೈಡ್ ಲೈನ್ ಗಳನ್ನು ಜಾರಿಗೆ ತರಬಹುದು. ನಾವು ಕೂಡಲೇ ಅಂತಹ ಶಾಲೆಗಳನ್ನು ಬಂದ್ ಮಾಡುತ್ತೇವೆ ಎಂದರು.
ಇದಕ್ಕೂ ಮೊದಲು ಸಚಿವರು ಭಾಲ್ಕಿ ಹೀರೆಮಠ ಸಂಸ್ಥಾನಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾದರು. ಬಳಿಕ ಭಾಲ್ಕಿ ತಾಲೂಕಿನ ಕಲವಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಬಿಸಿಯೂಟ ಮಾಡುತ್ತಿದ್ದ ಮಕ್ಕಳಿಗೆ ಸಚಿವರು ಸಾಂಬಾರ ಬಡಿಸಿ ಮಕ್ಕಳ ಕುಶಲೋಪರಿ ವಿಚಾರಿಸಿದರು. ಇದನ್ನೂ ಓದಿ: ಗಾಂಧಿವಾದಿ ಎಸ್.ಎನ್.ಸುಬ್ಬರಾವ್ ನಿಧನಕ್ಕೆ ಸಿಎಂ ಸಂತಾಪ