– ಮಿಸ್ಸಾಗಿದ್ರೆ 150 ಅಡಿ ಕಂದಕಕ್ಕೆ ಶಾಲಾ ಬಸ್
ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್ಸೊಂದು ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆದು ಸುಟ್ಟು ಹೋಗಿದೆ. ಆದರೆ ಕೂದಲೆಳೆ ಅಂತರದಲ್ಲಿ ಮಕ್ಕಳು ಹಾಗೂ ಶಿಕ್ಷಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುದ್ದಿನಕೊಪ್ಪ ಗ್ರಾಮದಲ್ಲಿ ನಡೆದಿದೆ.
ಕೊಪ್ಪ ತಾಲೂಕಿನ ಬಸರೀಕಟ್ಟೆ ಗ್ರಾಮದ ಸದ್ಗುರು ಶಾಲೆಯ ಮಕ್ಕಳನ್ನ ಶಾಲಾ ಬಸ್ ಕಳಸ, ಹಳುವಳ್ಳಿಯಿಂದ ಕರೆದುಕೊಂಡು ಬಸರೀಕಟ್ಟೆಗೆ ಹೂಗುತಿತ್ತು. ಇದೇ ವೇಳೆ ಬಸ್ಸಿನ ಹಿಂಬದಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಚಾಲಕ ಬಸ್ ಇಳಿದು ನೋಡುವಷ್ಟರಲ್ಲಿ ಹಿಂಬದಿಯಲ್ಲಿ ಇಳಿಜಾರು ಇದ್ದಿದ್ದರಿಂದ ನಿಧಾನವಾಗಿ ಹಿಂದಕ್ಕೆ ಚಲಿಸಿ ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆದಿದೆ.
ಬಸ್ ಹಿಮ್ಮುಖವಾಗಿ ಚಲಿಸುತ್ತಿದ್ದಂತೆ ಕೆಲ ಮಕ್ಕಳು ಹಾಗೂ ಶಿಕ್ಷಕರು ಇಳಿದುಕೊಂಡಿದ್ದಾರೆ. ಇನ್ನು ಕೆಲವರು ಬಸ್ನಲ್ಲೇ ಇದ್ದರು. ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆದು ನಿಲ್ಲುತ್ತಿದ್ದಂತೆ ಬಸ್ಸಿನಲ್ಲಿದ್ದ ಮಕ್ಕಳು-ಶಿಕ್ಷಕರು ಇಳಿದಿದ್ದಾರೆ. ನಂತರ ಸ್ಥಳಿಯರು ಹಳ್ಳದಲ್ಲಿ ಹರಿಯುತ್ತಿದ್ದ ನೀರನ್ನ ತಂದು ಹಾಕಿ ಬೆಂಕಿಯನ್ನು ನಂದಿಸಿದ್ದಾರೆ.
ಈ ಘಟನೆಯಿಂದ ಮಕ್ಕಳ ಪುಸ್ತಕ ಹಾಗೂ ಬ್ಯಾಗ್ಗಳು ಸಂಪೂರ್ಣ ಸುಟ್ಟುಹೋಗಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಬಸ್ ನಿಲ್ದಾಣ ಸಂಪೂರ್ಣ ಜಖಂಗೊಂಡಿದ್ದು, ಸ್ಥಳಿಯರು ಚಾಲಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ಸಿನಲ್ಲಿ ಮಕ್ಕಳು ಹಾಗೂ ಶಿಕ್ಷಕರು ಸೇರಿ ಸುಮಾರು 15 ಮಂದಿ ಪ್ರಯಾಣಿಸುತ್ತಿದ್ದರು. ಬಸ್ಸಿಗೆ ಬಸ್ ನಿಲ್ದಾಣ ಅಡ್ಡವಾಗಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಬಸ್ ನಿಲ್ದಾಣ ಇಲ್ಲದಿದ್ದರೆ ಬಸ್ ಸುಮಾರು 100-150 ಅಡಿ ಆಳದ ಕಂದಕಕ್ಕೆ ಬೀಳುತಿತ್ತು.