ಶಿವಮೊಗ್ಗ: ತ್ಯಾವರೆಕೊಪ್ಪ ಮೃಗಾಲಯದಲ್ಲಿ (Tiger and Lion Safari Tyavarekoppa) ಅನಾರೋಗ್ಯಕ್ಕೀಡಾದ 15 ವರ್ಷದ ಗಂಡು ಚಿರತೆಗೆ (Leopard) ಕಳೆದ ರಾತ್ರಿ ಶಿವಮೊಗ್ಗದ (Shivamogga) ನಂಜಪ್ಪ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಮಾಡಲಾಗಿದೆ. ತುರ್ತಾಗಿ ಎಂಆರ್ಐ ಸ್ಕ್ಯಾನಿಂಗ್ನ ಅಗತ್ಯ ಇದ್ದಿದ್ದರಿಂದ ಚಿರತೆಯನ್ನು ಆಸ್ಪತ್ರೆಗೆ ಕರೆತರಲಾಗಿತ್ತು.
ಕಳೆದ ಎರಡು ದಿನದಿಂದ ಚಿರತೆ ನಿತ್ರಾಣಗೊಂಡಿತ್ತು. ಚಿಕಿತ್ಸೆ ನಡೆಸುತ್ತಿದ್ದ ಮೃಗಾಲಯದ ವೈದ್ಯರು ತುರ್ತಾಗಿ ಸ್ಕ್ಯಾನಿಂಗ್ ಅಗತ್ಯವಿದೆ ಎಂದು ತಿಳಿಸಿದ್ದರು. ಈ ಹಿನ್ನೆಲೆ ಮೃಗಾಲಯದ ಸಿಬ್ಬಂದಿ ಚಿರತೆಯನ್ನು ನಂಜಪ್ಪ ಆಸ್ಪತ್ರೆಗೆ ಕರೆತಂದಿದ್ದರು. ಶಿವಮೊಗ್ಗದ ಮೃಗಾಲಯದಲ್ಲಿ ಎಂಆರ್ಐ ಸ್ಕ್ಯಾನಿಂಗ್ ವ್ಯವಸ್ಥೆ ಇಲ್ಲ. ಇತ್ತ ಪಶುವೈದ್ಯಕೀಯ ಕಾಲೇಜಿನಲ್ಲಿಯು ಈ ಸೌಲಭ್ಯವಿಲ್ಲ. ಆದ್ದರಿಂದ ನಂಜಪ್ಪ ಆಸ್ಪತ್ರೆಯಲ್ಲಿಯೇ ಎಂಆರ್ಐ ಸ್ಕ್ಯಾನಿಂಗ್ ಮಾಡಲು ನಿರ್ಧರಿಸಲಾಯಿತು. ಬೆಳಗಿನ ಹೊತ್ತು ಆಸ್ಪತ್ರೆಯಲ್ಲಿ ಜನ ಹೆಚ್ಚಿರುವ ಹಿನ್ನೆಲೆ ಚಿರತೆಗೆ ನಡುರಾತ್ರಿ ಸ್ಕ್ಯಾನಿಂಗ್ಗೆ ವ್ಯವಸ್ಥೆ ಮಾಡಲಾಗಿತ್ತು. ಇದನ್ನೂ ಓದಿ: ಸದ್ಯ ಸೋಮವಾರದಿಂದ ಮೆಟ್ರೋ ದರ ಏರಿಕೆ ಇಲ್ಲ: ತೇಜಸ್ವಿ ಸೂರ್ಯ ಸ್ಪಷ್ಟನೆ
ಚಿರತೆಗೆ ಮಂಪರು ಇಂಜೆಕ್ಷನ್ ನೀಡಿ ಮೃಗಾಲಯದ ವಾಹನದಲ್ಲಿಯೇ ಕುವೆಂಪು ರಸ್ತೆಯ ನಂಜಪ್ಪ ಆಸ್ಪತ್ರೆಗೆ ಕರೆತರಲಾಗಿತ್ತು. ಸ್ಕ್ಯಾನಿಂಗ್ ಪ್ರಕ್ರಿಯೆ ಆರಂಭವಾಗುವ ಹೊತ್ತಿಗೆ ಪುನಃ ಮಂಪರು ಇಂಜೆಕ್ಷನ್ ನೀಡಲಾಯಿತು. ಸುಮಾರು ಅರ್ಧ ಗಂಟೆ ಸ್ಕ್ಯಾನಿಂಗ್ ಪ್ರಕ್ರಿಯೆ ನಡೆಯಿತು.
ಈ ಬಗ್ಗೆ ಮಾತನಾಡಿದ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಅಮರಾಕ್ಷರ, ಕಾಡಿನಲ್ಲಿ ಚಿರತೆಗಳು ಸಮಾನ್ಯವಾಗಿ 10 ವರ್ಷ ಬದುಕುತ್ತವೆ. ಇಲ್ಲಿನ ಮೃಗಾಲಯದಲ್ಲಿ 15 ವರ್ಷ ಬದುಕಿದೆ. ಕಳೆದ ಎರಡು ದಿನದಿಂದ ಚಿರತೆಗೆ ಅನಾರೋಗ್ಯ ಉಂಟಾಗಿದೆ. ಸ್ಕ್ಯಾನಿಂಗ್ನ ಅಗತ್ಯವಿದ್ದರಿಂದ ನಂಜಪ್ಪ ಆಸ್ಪತ್ರೆಗೆ ಕರೆತರಲಾಗಿದೆ. ಮನುಷ್ಯರು ಮತ್ತು ಪ್ರಾಣಿಗಳ ಸ್ಕ್ಯಾನಿಂಗ್ ಪ್ರಕ್ರಿಯೆ ಒಂದೇ ರೀತಿಯದ್ದು. ಆದ್ದರಿಂದ ಇಲ್ಲಿಗೆ ಕರೆತಂದಿದ್ದೇವೆ. ಮೃಗಾಲಯದಲ್ಲಿ ಮುಂದಿನ ಚಿಕಿತ್ಸೆ ಮುಂದುವರೆಯಲಿದೆ ಎಂದು ತಿಳಿಸಿದರು. ಇದನ್ನೂ ಓದಿ: ಅಂತಾರಾಷ್ಟ್ರೀಯ ತೈಲ ಕಳ್ಳಸಾಗಣೆ ದಂಧೆ ಬಯಲು – ಸಮುದ್ರದಲ್ಲಿ ಅಕ್ರಮವಾಗಿ ತೈಲ ಮಾರಾಟ ಮಾಡುತ್ತಿದ್ದ ಹಡಗುಗಳು ವಶಕ್ಕೆ

