ನವದೆಹಲಿ: `ದಿ ಕೇರಳ ಸ್ಟೋರಿ’ (The Kerala Story) ಚಿತ್ರವನ್ನು ಪಶ್ಚಿಮ ಬಂಗಾಳ (West Bengal) ನಿಷೇಧಿಸಿರುವುದು ಹಾಗೂ ತಮಿಳುನಾಡಿನಲ್ಲಿ (Tamil Nadu) ನಿಷೇಧಕ್ಕೆ ಮುಂದಾಗಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ (Supreme Court) ಹೇಳಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (CJI) ಡಿವೈ ಚಂದ್ರಚೂಡ್ (DY Chandrachud) ನೇತೃತ್ವದ ಪೀಠವು ಈ ವಿಷಯವನ್ನು ಬುಧವಾರ ತುರ್ತು ಪಟ್ಟಿಗೆ ಸೇರಿಸಿದ ನಂತರ ಮೇ 12 ರಂದು ವಿಚಾರಣೆಗೆ ಮುಂದೂಡಿತು. ಅಲ್ಲದೆ ನ್ಯಾಯಮೂರ್ತಿ ಪಿಎಸ್ ನರಸಿಂಹ ಅವರನ್ನೊಳಗೊಂಡ ಪೀಠವು ಚಿತ್ರದ ಬಿಡುಗಡೆಗೆ ತಡೆ ನೀಡಲು ನಿರಾಕರಿಸಿದ್ದ ಕೇರಳ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಲು ಸೋಮವಾರ ಒಪ್ಪಿಕೊಂಡಿತ್ತು. ಇದನ್ನೂ ಓದಿ: ಸಲಿಂಗ ವಿವಾಹ ಕಾನೂನು ಮಾನ್ಯತೆ ವಿಚಾರಣೆ – ಸಿಜೆಐ ಹಿಂದೆ ಸರಿಯುವಂತೆ ಸಲ್ಲಿಸಿದ್ದ ಮನವಿ ತಿರಸ್ಕೃತ
ಚಲನಚಿತ್ರ ನಿರ್ಮಾಪಕ ಸನ್ಶೈನ್ ಪಿಕ್ಚರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ವಿಪುಲ್ ಅಮೃತಲಾಲ್ ಶಾ ಅವರ ಪರ ಹಿರಿಯ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಿದ್ದಾರೆ. ಅವರು ನ್ಯಾಯಾಲಯದ ಮುಂದೆ ಪಶ್ಚಿಮ ಬಂಗಾಳ ಚಿತ್ರವನ್ನು ನಿಷೇಧ ಮಾಡಿರುವುದರಿಂದ ಆರ್ಥಿಕವಾಗಿ ನಷ್ಟವಾಗುತ್ತಿದೆ. ಅಲ್ಲದೆ ತಮಿಳುನಾಡು ಸಹ ಚಿತ್ರ ನಿಷೇಧಕ್ಕೆ ಮುಂದಾಗಿದೆ. ಚಿತ್ರವನ್ನು ನಿಷೇಧ ಮಾಡುತ್ತಿರುವುದು ಸವಿಂಧಾನದ 19 (1) (ಎ) ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಯತ್ನ ಎಂದು ನ್ಯಾಯಾಲಯದ ಮುಂದೆ ಹೇಳಿಕೊಂಡಿದ್ದಾರೆ.
ಚಿತ್ರ ನಿಷೇಧವು ಚಲನಚಿತ್ರದಿಂದ ಬರುವ ಆದಾಯವನ್ನು ಕಡಿತಗೊಳಿಸುವ ಉದ್ದೇಶದಿಂದ ಮಾಡಲಾಗಿದೆ. ಅಲ್ಲದೆ ಇದು ಚಲನಚಿತ್ರದ ಪೈರೇಟೆಡ್ ಡಿವಿಡಿಗಳಿಗೆ ಪ್ರಚೋದನೆಯನ್ನು ನೀಡುತ್ತದೆ ಎಂದು ನಿರ್ಮಾಪಕರು ದೂರಿದ್ದಾರೆ.
ಚಲನಚಿತ್ರಗಳ (ನಿಯಂತ್ರಣ) ಕಾಯಿದೆಯ ಸೆಕ್ಷನ್ 6 (1) ಅಡಿಯಲ್ಲಿ ಶಾಂತಿ ಭಂಗವನ್ನು ಉಂಟುಮಾಡುವ ಸಾಧ್ಯತೆ, ದ್ವೇಷ ಮತ್ತು ಹಿಂಸಾಚಾರ ಸಾಧ್ಯತೆ ಸಲುವಾಗಿ ಪಶ್ಚಿಮ ಬಂಗಾಳ ಈ ಚಿತ್ರಕ್ಕೆ ನಿಷೇಧ ಹೇರಿತ್ತು. ಇದನ್ನೂ ಓದಿ: ಮುಸ್ಲಿಂ ಮೀಸಲಾತಿ ರದ್ದು ಪ್ರಕರಣ – ರಾಜಕೀಯ ಹೇಳಿಕೆಗಳಿಗೆ ಸುಪ್ರೀಂ ಕಿಡಿ