ಮುಂಬೈ: ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ಯೆಸ್ ಬ್ಯಾಂಕ್ ಪುನಶ್ಚೇತನಕ್ಕೆ ಎಸ್ಬಿಐ ಮುಂದಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಎಸ್ಬಿಐ ಚೇರ್ಮನ್ ರಜನೀಶ್ ಕುಮಾರ್, ಯೆಸ್ ಬ್ಯಾಂಕ್ನ ಶೇ.49ರಷ್ಟು ಷೇರು ಖರೀದಿಗೆ ಎಸ್ಬಿಐ ಮುಂದಾಗಿದ್ದು, ಮೊದಲ ಹಂತದಲ್ಲಿ 2,450 ಕೋಟಿ ರೂ. ವಿನಿಯೋಗಿಸಲು ಉದ್ದೇಶಿಸಿದೆ. ಮುಂದಿನ ಹಂತದಲ್ಲಿ 10 ಸಾವಿರ ಕೋಟಿ ಹೂಡಿಕೆ ಮಾಡಲಿದ್ದೇವೆ. ಯೆಸ್ ಬ್ಯಾಂಕ್ ಗ್ರಾಹಕರು, ಷೇರುದಾರರ ಹಿತ ಕಾಪಾಡಲು ಎಸ್ಬಿಐ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ, ಅಕ್ರಮ ಹಣ ರವಾನೆ ಆರೋಪದ ಮೇಲೆ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ನನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಿದೆ. ಡಿಹೆಚ್ಎಫ್ಎಲ್ ಬ್ಯಾಂಕ್ಗೆ ನೀಡಿದ ಸಾಲ ವಾಪಸ್ ಆಗಿಲ್ಲ. ಇದರಲ್ಲಿ ಕಪೂರ್ ಪಾತ್ರ ಇರುವ ಬಗ್ಗೆ ಸಂಶಯದ ಮೇಲೆ ತನಿಖೆ ನಡೆಸಿದೆ. ಕಳೆದ ರಾತ್ರಿಯಿಂದ ಕಪೂರ್ ಮನೆಯಲ್ಲಿ ಇಡಿ ಶೋಧ ಕಾರ್ಯ ನಡೆಸಿದೆ.
2ನೇ ದಿನವೂ ದುಡ್ಡಿಗಾಗಿ ಗ್ರಾಹಕರು ಪರದಾಡಿದ್ದಾರೆ. ಬೆಂಗಳೂರಿನ ಹಲವು ಶಾಖೆಗಳಲ್ಲಿ ದುಡ್ಡು ಬಿಡಿಸಿಕೊಳ್ಳಲು ಜನ ಸಾಲುಗಟ್ಟಿ ನಿಂತಿದ್ದರು. ತಿಂಗಳ ವೇತನ ತೆಗೆಯಲಾಗದೇ ಕೆಲವರು ಪರದಾಡಿದರು. ಬ್ಯಾಂಕ್ನಲ್ಲಿ ಮೂರೂವರೆ ಲಕ್ಷ ದುಡ್ಡು ಇಟ್ಟಿದ್ದೆ. ಈಗ ತೆಗೆಯಲು ಆಗುತ್ತಿಲ್ಲ. ನನ್ನ ಗಂಡ ಆಸ್ಪತ್ರೆಯಲ್ಲಿದ್ದಾರೆ ಅಂತ ವೃದ್ಧೆ ಕಣ್ಣೀರಿಟ್ಟಿದ್ದಾರೆ.