ಹೈದಾರಾಬಾದ್: ಸುಮಾರು 80 ಲಕ್ಷ ಮೌಲ್ಯದ ನಗದು ಮತ್ತು ಚಿನ್ನ ಕದ್ದ ಆರೋಪದ ಮೇಲೆ ಎಸ್ಬಿಐ ಕ್ಯಾಶಿಯರ್ ನನ್ನು ಪೊಲೀಸರು ಬಂಧಿಸಿದ ಘಟನೆ ಶಂದ್ರೊರದೇಶದ ವಿಜಯವಾಡದಲ್ಲಿ ನಡೆದಿದೆ.
ಜಿ. ಶ್ರೀನಿವಾಸ ರಾವ್ ನನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಈತನಿಂದ 20.75 ಲಕ್ಷ ನಗದು, 61 ಲಕ್ಷ ಮೌಲ್ಯದ 2. 200 ಗ್ರಾಂ ಚಿನ್ನ ಹಾಗೂ 6 ಲಕ್ಷ ವೆಚ್ಚದ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ರಾವ್ ಎಸ್ಬಿಐ ಬ್ಯಾಂಕ್ ನ ಪರಿಟಲ ಬ್ರ್ಯಾಂಚ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದನು. ಈತ ನಗದು ಹಾಗೂ ಚಿನ್ನದ ವ್ಯವಹಾರ ಮಾಡುವ ಕೆಲಸ ಮಾಡುತ್ತಿದ್ದನು. ಅಲ್ಲದೆ ಈತ ಹಳೆಯ ಬ್ರ್ಯಾಂಚ್ ಮ್ಯಾನೇಜರ್ ಯೋಗಿತರೊಂದಿಗೆ ನಿಕಟ ಸಂಪರ್ಕವನ್ನು ಇಟ್ಟುಕೊಂಡಿದ್ದನು. ತುಂಬಾ ಕ್ಲೋಸ್ ಇದ್ದುದ್ದರಿಂದ ಯೋಗಿತಾ ಬ್ಯಾಂಕ್ ಲಾಕರ್ ಕೀಗಳನ್ನೆಲ್ಲ ಈತನ ಬಳಿಯೇ ನಂಬಿಕೆಯಿಂದ ಕೊಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಿಯಮದ ಪ್ರಕಾರ ಬ್ಯಾಂಕ್ ಮ್ಯಾನೇಜರೇ ಲಾಕರ್ ಗಳನ್ನು ಇಟ್ಟುಕೊಳ್ಳಬೇಕು. ಆದರೆ ಇಲ್ಲಿ ಆಕೆ ತಪ್ಪು ಮಾಡಿದ್ದು, ಇದೀಗ ಪಶ್ಚಾತ್ತಾಪಕ್ಕೀಡಾಗಿದ್ದಾರೆ.
ಇತ್ತ ಇದನ್ನೇ ಅನುಕೂಲ ಮಾಡಿಕೊಂಡ ರಾವ್, ಲಾಕರ್ ನಲ್ಲಿಟ್ಟಿದ್ದ 19 ಲಕ್ಷ ನಗದು ಹಾಗೂ ಬಂಗಾರಗಳನ್ನಿಡುತ್ತಿದ್ದ ಬ್ಯಾಗನ್ನೇ ಎಗರಿಸಿದ್ದಾನೆ. ಕದ್ದ ಬಳಿಕ ಅನುಮಾನ ಬಾರದಂತೆ ಚಿನ್ನವನ್ನು ಅಡಮಾನ ಇಟ್ಟು, ನಕಲಿ ಹೆಸರಿನಲ್ಲಿ ಲೋನ್ ಪಡೆದಿರುವುದಾಗಿ ಹೇಳುವ ಮೂಲಕ ಜಾರಿಕೊಳ್ಳಲು ಪ್ರಯತ್ನಿಸಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಹೊಸ ಬ್ರ್ಯಾಂಚ್ ಮ್ಯಾನೇಜರ್ ಜಿ. ಓಂ ಪ್ರಕಾಶ್ ಬಂದು ಲಾಕರ್ ತೆಗೆದಾಗ ಅದರಲ್ಲಿ 19 ಲಕ್ಷ ಇರಲಿಲ್ಲ. ಆಗ ಈ ವಿಚಾರ ಬೆಳಕಿಗೆ ಬಂದ ಕೂಡಲೇ ಅವರು ಪೊಲೀಸರಿಗೆ ದೂರು ನೀಡಿದ್ದು, ಸದ್ಯ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.