– ಕಣ್ಣೀರಲ್ಲಿ ಕೈತೊಳೀತಿದೆ ಕೋಲಾರದ ರೈತ ಕುಟುಂಬ
ಕೋಲಾರ: ಈ ರೈತ ಕಷ್ಟ ಎಂದು ಹತ್ತಾರು ವರ್ಷಗಳ ಕಾಲ ಕೂಡಿಟ್ಟಿದ್ದ ಚಿನ್ನದ ಒಡವೆಗಳನ್ನು ತಂದು ಬ್ಯಾಂಕ್ ನಲ್ಲಿ ಅಡವಿಟ್ಟಿದ್ದರು. ಬಡ್ಡಿಯನ್ನು ಕೂಡ ಸಮಯಕ್ಕೆ ಸರಿಯಾಗೇ ಕಟ್ಟಿದ್ದಾರೆ. ಆದರೆ ಬ್ಯಾಂಕ್ ಅಧಿಕಾರಿಗಳ ಯಡವಟ್ಟಿನಿಂದ ರೈತ ಕುಟುಂಬ ಕಂಗಾಲಾಗಿದೆ.
2014ರಲ್ಲಿ ಕೋಲಾರದ ಚಲಪತಿ ಎಂಬವರು 62 ಗ್ರಾಂ. ಚಿನ್ನದ ಒಡವೆ ಅಡವಿಟ್ಟು ಎಸ್ಬಿಐ ಬ್ಯಾಂಕ್ ನ ಶಾಖೆಯಲ್ಲಿ 90,000 ರೂ. ಸಾಲ ಪಡೆದಿದ್ದರು. ಟೈಮ್ ಗೆ ಸರಿಯಾಗಿ ಬಡ್ಡಿ ಕೂಡ ಕಟ್ಟಿದ್ದರು. ಕೇವಲ 2,511 ರೂ. ಬಡ್ಡಿ ಮಾತ್ರ ಬಾಕಿ ಇದೆ ಎಂದು ಬ್ಯಾಂಕ್ ನವರು ಹೇಳಿದ್ದರು. ಹೀಗಿರುವಾಗಲೇ ಏಕಾಏಕಿ ಚಲಪತಿ ಅವರಿಗೆ ನೋಟಿಸ್ ಕೊಟ್ಟು ಅವರ ಒಡವೆಯನ್ನು ಹರಾಜ್ ಹಾಕಿದ್ದಾರೆ. ಏನ್ರಿ ಇದೆಲ್ಲಾ ಎಂದು ಬ್ಯಾಂಕ್ ಅಧಿಕಾರಿಗಳನ್ನು ಕೇಳಿದ್ದರೆ ಬೆದರಿಸುತ್ತಾರೆ ಎಂದು ಚಲಪತಿ ಹೇಳುತ್ತಾರೆ.
ಇಷ್ಟೇ ಅಲ್ಲ. ಬ್ಯಾಂಕ್ ನವರು ಹರಾಜು ಪ್ರಕ್ರಿಯೆಯನ್ನು ಕಾನೂನಿನ ಪ್ರಕಾರ ನಡೆಸಿಲ್ಲ. ಎಲ್ಲಾ ರೂಲ್ಸ್ ಬ್ರೇಕ್ ಮಾಡಿ ಎಸ್ಬಿಐ ಬ್ಯಾಂಕ್ ಸಿಬ್ಬಂದಿ ಚಲಪತಿಯವರಿಂದ ಬರಬೇಕಿದ್ದ 1.05 ಲಕ್ಷ ರೂಪಾಯಿಗೆ 2 ಲಕ್ಷ ರೂಪಾಯಿ ಮೌಲ್ಯದ ಒಡವೆಗಳನ್ನು ಹರಾಜು ಹಾಕಿದ್ದಾರೆ. ಈ ವೇಳೆ ವಿಚಾರಣೆ ಮಾಡಿದಾಗ ಬ್ಯಾಂಕ್ ಸಿಬ್ಬಂದಿಯೇ ಯಡವಟ್ಟು ಮಾಡಿರೋದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಇನ್ನು ಈ ಬಗ್ಗೆ ಪರಿಶೀಲನೆ ಮಾಡುತ್ತೀವಿ ಎಂದು ಬ್ಯಾಂಕ್ ಅಧಿಕಾರಿಗಳು ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ಬ್ಯಾಂಕ್ ನ ಯಡವಟ್ಟಿನಿಂದ ರೈತನ ಕುಟುಂಬ ಮೋಸ ಹೋಗಿದೆ. ಕೂಡಲೇ ಬ್ಯಾಂಕ್ ಅಧಿಕಾರಿಗಳು ರೈತನ ಕುಟುಂಬಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ನ್ಯಾಯ ಒದಗಿಸಬೇಕಿದೆ.