ಬೆಳಗಾವಿ: ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಿಜಬ್, ಕೇಸರಿ ಶಾಲು ಧರಿಸಬಾರದು. ಅವರ ಜಾತಿ, ಧರ್ಮ ಅವರ ಜೊತೆಯೇ ಇರುತ್ತೆ. ಶಿಕ್ಷಣ ಸಂಸ್ಥೆಗಳ ಆಡಳಿತದಲ್ಲಿ ಈ ರೀತಿ ಆಗಬಾರದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈಗಲಾದರೂ ಸರ್ಕಾರ ಈ ವಿವಾದ ತಡೆಯಲು ಮುಂದಾಗಬೇಕು. ಇಂತಹ ಸುದ್ದಿಗಳು ಕಡೆ ಹರಡಿದರೆ ಬಹಳ ದೊಡ್ಡ ಸಮಸ್ಯೆ ಆಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್ ಮಾನಸಿಕತೆ ಮೋಸ್ಟ್ ಡೇಂಜರಸ್: ಪ್ರಮೋದ್ ಮುತಾಲಿಕ್
ರಾಮದುರ್ಗದಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದ ಪ್ರಕರಣ ವಿಚಾರವಾಗಿ ಮಾತನಾಡಿದ ಸತೀಶ್ ಜಾರಕಿಹೊಳಿ, ಈ ರೀತಿ ಆಗಬಾರದು ಎಂದು ನಾವು ಕಳಕಳಿ ಮನವಿ ಮಾಡುತ್ತೇವೆ. ಧಾರ್ಮಿಕ ವ್ಯವಸ್ಥೆ ಆ ರೀತಿ ಮಾಡುತ್ತಿದೆ. ಮೊದಲು ಧರ್ಮಗಳನ್ನು ಪೂರ್ಣ ಅಧ್ಯಯನ ಮಾಡಬೇಕು. ಕೇಸರಿ ಶಾಲು ಹಾಕು ಆ ಶಾಲು ಹಾಕು ಅಂತಾ ಧರ್ಮಗಳು ಹೇಳಿಲ್ಲ. ಧರ್ಮಗಳು ಒಳ್ಳೆಯದನ್ನ ಹೇಳುತ್ತವೆ. ಆದರೆ ಕೆಲವು ಸಂಘಟನೆಗಳಿಂದ ದಾರಿ ತಪ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಕಲಿಯುವಂತಹ ವಯಸ್ಸಿದು. ಜ್ಞಾನ ಪಡೆಯುವ ಕಾಲದಲ್ಲಿ ಧರ್ಮ, ಜಾತಿ ಸಮಸ್ಯೆ ಆಗಬಾರದು. ವಿವಾದ ಇಲ್ಲಿಗೆ ನಿಲ್ಲಬೇಕು ಎಂಬುದೇ ನಮ್ಮ ಮನವಿ. ಈ ಬೆಳವಣಿಗೆ ಖಂಡಿತವಾಗಿಯೂ ಸರಿಯಲ್ಲ. ಸರ್ಕಾರಕ್ಕೆ ತನ್ನದೇ ಆದ ನಿರ್ಬಂಧ ಇದೆ. ಸರ್ಕಾರ ಏನೂ ಮಾಡೋಕೆ ಆಗಲ್ಲ. ಆಯಾ ಶಾಲಾ-ಕಾಲೇಜುಗಳ ಆಡಳಿತ ಮಂಡಳಿಗಳು ಮುಂದಾಗಿ ಸಂಧಾನದ ಮೂಲಕ ಶಮನ ಮಾಡಬೇಕು. ಸಮವಸ್ತ್ರ ನೀತಿ ನಮ್ಮಂತಹ ದೊಡ್ಡ ದೇಶದಲ್ಲಿ ಮಾಡುವುದು ಕಷ್ಟ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್ ಬಗ್ಗೆ ಯಾರೂ ಬಹಿರಂಗ ಚರ್ಚೆ ಮಾಡಬಾರದು: ಡಿಕೆಶಿ