ಬೆಳಗಾವಿ: ಇಡೀ ಕಾಂಗ್ರೆಸ್ ಪಕ್ಷವೇ ಗಾಂಧಿ ಕುಟುಂಬದ ಹಿಡಿತದಲ್ಲಿದೆ ಎನ್ನುವ ಬಿಜೆಪಿಯವರು (BJP), ಅವರೇ ಆರ್ಎಸ್ಎಸ್ನ (RSS) ಹಿಡಿತದಲ್ಲಿದ್ದಾರೆ. ಇನ್ನೂ ಗಾಂಧಿ ಕುಟುಂಬ ಮತ್ತು ಕಾಂಗ್ರೆಸ್ (Congress) ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಕಿಡಿಕಾರಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋನಿಯಾ ಗಾಂಧಿ ಮನಸ್ಸು ಮಾಡಿದರೆ ಎರಡು ಬಾರಿ ಅವರೇ ಪ್ರಧಾನಿ ಆಗಬಹುದಿತ್ತು. ಆದರೆ ಅವರು ಡಾ. ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಮಾಡಿದರು. ಈಗ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ್ ಖರ್ಗೆ ಅವರು ಸ್ಪರ್ಧಿಸಿದ್ದು, ಅವರೇ ಎಐಸಿಸಿ ಅಧ್ಯಕ್ಷರಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿದ್ದು, ನಮಗೂ ಹೆಮ್ಮೆ ಇದೆ ಎಂದರು.
ಆರ್ಎಸ್ಎಸ್ನವರು ಎಲ್ಲರೂ ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಪರ ಇಲ್ಲ. ಅದರಲ್ಲಿ ಕೆಲವರು ಒಳ್ಳೆಯವರೂ ಇದ್ದಾರೆ. ಅವರಿಗೆ ದೇಶದ ಅಭಿವೃದ್ಧಿಬೇಕಾಗಿದೆ. ಅದೇ ಕಾರಣಕ್ಕೆ ಇತ್ತಿಚೆಗೆ ಅವರು ಬಿಜೆಪಿ ಸರ್ಕಾರದ ವಿರುದ್ಧ ಟೀಕೆ ಮಾಡಿ ಅಸಮಾಧಾನ ಹೊರಹಾಕುತ್ತಿದ್ದಾರೆ ಎಂದರು.
ಪರೇಶ್ ಮೇಸ್ತಾ ಸಾವು ಹತ್ಯೆಯಲ್ಲ, ಆಕಸ್ಮಿಕ ಸಾವು ಎಂದು ಸಿಬಿಐ ತಿಳಿಸಿದೆ. ಆದರೆ ಈ ಪ್ರಕರಣದಲ್ಲಿ ಆತನನ್ನು ಅನ್ಯ ಕೋಮಿನವರು ಹತ್ಯೆ ಮಾಡಿದ್ದಾರೆಂದು ಬಿಜೆಪಿಯವರು ಆರೋಪಿಸಿದ್ದರು. ಈ ಘಟನೆಯಿಂದ ಕೊಮುಸಂಘರ್ಷ ಉಂಟಾಗಿತ್ತು. ಇದನ್ನೇ ಲಾಭ ಪಡೆದ ಬಿಜೆಪಿಯವರು ಕರಾವಳಿ ಭಾಗದ 3 ಜಿಲ್ಲೆಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಸೋಲಿಸಿದರು. ಇದನ್ನೂ ಓದಿ: ಸ್ವಾತಂತ್ರ್ಯ ಸಿಕ್ಕಿದಾಗಲೇ ಮುಸಲ್ಮಾನರಲ್ಲಿ ರಾಷ್ಟ್ರಪ್ರೇಮ ರಾಷ್ಟ್ರೀಯತೆ ಬಿತ್ತಬೇಕಿತ್ತು: ಮುತಾಲಿಕ್
ಡಿ.ಕೆ. ರವಿ ಮತ್ತು ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿಯವರು ಕಾಂಗ್ರೆಸ್ ಸರ್ಕಾರ ಮೇಲೆ ಆರೋಪ ಮಾಡಿದ್ದರು. ಈ ಪ್ರಕರಣಗಳಲ್ಲಿಯೂ ಸಿಬಿಐ ಬಿ ರಿಪೋರ್ಟ್ ಸಲ್ಲಿಸಿದೆ. ಕಾರಣ ಜನತೆ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಗುಜರಾತ ಮುಖ್ಯಮಂತ್ರಿ ಇದ್ದಾಗ ಪ್ರಧಾನಿ ನರೇಂದ್ರ ಮೋದಿಯವರು ತಂದ ಎರಡು ಚಿರತೆಗಳು ಸಾವನ್ನಪ್ಪಿದವು, ಆದರೆ ಆ ಸಂದರ್ಭದಲ್ಲಿ ಸುದ್ದಿಗಳು ಪ್ರಕಟವಾಗಲಿಲ್ಲ. ಆದರೆ ಮೊನ್ನೆ ನಬೀಬಿಯಾದಿಂದ ತಂದ ಚಿರತೆಗಳನ್ನು ಮಧ್ಯ ಪ್ರದೇಶದ ಕೂನೊ ರಾಷ್ಟ್ರೀಯ ಉದ್ಯಾನದಲ್ಲಿ ಅವುಗಳನ್ನು ಬಿಟ್ಟಾಗ ಮೂರು ದಿನ ಮಾಧ್ಯಮದಲ್ಲಿ ಅದೇ ಸುದ್ದಿ ಪ್ರಸಾರವಾಯಿತು. ಹೀಗಾಗಿ ಪ್ರಧಾನಿ ಮೋದಿಯವರ ಪ್ರಚಾರಕ್ಕೆ ಸಮಯ ನೀಡುವ ಮಾಧ್ಯಮಗಳು ಸಾಮಾನ್ಯ ಜನರ ಸಮಸ್ಯೆಗಳ ಬಗ್ಗೆ ನಿರುದ್ಯೋಗ, ಬೆಲೆ ಏರಿಕೆ ಬಗ್ಗೆ ಚರ್ಚೆ ಮಾಡುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಜಮ್ಮು ಕಾಶ್ಮೀರದಿಂದ ಭಯೋತ್ಪಾದನೆಯನ್ನು ನಿರ್ನಾಮ ಮಾಡುತ್ತೇವೆ: ಅಮಿತ್ ಶಾ