ಕಿರುತೆರೆ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಶೋ ‘ಸರಿಗಮಪ’ (Saregamapa 19) ಈಗಾಗಲೇ 18 ಸೀಸನ್ಗಳ ಜೊತೆಗೆ ಚಾಂಪಿಯನ್ಶಿಪ್ ಸೀಸನ್ ಕೂಡ ಮಾಡಿದೆ. ಇದೀಗ 19ನೇ ಸೀಸನ್ನ ಅಂತಿಮ ಘಟ್ಟ ತಲುಪಿದೆ. ಕಾರ್ಯಕ್ರಮ ತೆರೆ ಬೀಳಲು ಈಗಾಗಲೇ ಕೌಂಡ್ಡೌನ್ ಶುರುವಾಗಿದೆ.
ಯಶಸ್ವಿ 47 ಸಂಚಿಕೆಗಳನ್ನ ಪೂರೈಸಿರುವ ‘ಸರಿಗಮಪ’ ಸೀಸನ್ 19ರ ಗ್ರಾಂಡ್ ಫಿನಾಲೆ ಸಂಚಿಕೆಗಳು ಇದೇ ಶನಿವಾರ ಮತ್ತು ಭಾನುವಾರ ಸಂಜೆ 6.30ರಿಂದ ಪ್ರಸಾರವಾಗಲಿದೆ. ಸಾವಿರಾರು ಜನರ ಮಧ್ಯೆ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಗ್ರ್ಯಾಂಡ್ ಫಿನಾಲೆ ಚಿತ್ರೀಕರಣ ಯಶಸ್ವಿಯಾಗಿ ಜರುಗಿದೆ. ಅಷ್ಟೇ ಅಲ್ಲದೆ, ಈ ಅದ್ಧೂರಿ ಸ್ವರ ಸಮರದಲ್ಲಿ ಗೆಲುವಿನ ಕಿರೀಟ ಯಾರ ಮುಡಿಗೇರಲಿದೆ ಎಂಬ ಕೂತೂಹಲದಿಂದ ವೀಕ್ಷಕರು ಕಾರ್ಯಕ್ರಮವನ್ನು ಎದುರು ನೋಡುವಂತಾಗಿದೆ. ಇದನ್ನೂ ಓದಿ:Weekend With Ramesh 5: ಮದುವೆ ಬಗ್ಗೆ ಗುಟ್ಟು ರಟ್ಟು ಮಾಡಿದ ಡಾಲಿ ಧನಂಜಯ್
ಹತ್ತು ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿರುವ ಸರಿಗಮಪ ಎಂದಿನಂತೆ ಈ ಬಾರಿಯೂ ಕರ್ನಾಟಕದ ಮೂಲೆ ಮೂಲೆಯಿಂದ ವಿವಿಧ ಪ್ರತಿಭೆಗಳನ್ನು ಹೆಕ್ಕಿ ತಂದು ಕನ್ನಡಿಗರಿಗೆ ಪರಿಚಯಿಸಿ ಸಾರ್ಥಕತೆ ಗಳಿಸಿದೆ. ಅರ್ಜುನ್ ಜನ್ಯ, ವಿಜಯ್ ಪ್ರಕಾಶ್ ಮತ್ತು ಮಹಾಗುರುಗಳಾದ ಹಂಸಲೇಖ ಅವರು ಈ ಕಾರ್ಯಕ್ರಮದ ಯಶಸ್ಸಿನ ರೂವಾರಿ ಎಂದು ಹೇಳಿದರೂ ತಪ್ಪಾಗಲಾರದು. ನಾಡಿನ ಹೆಸರಾಂತ ಗಾಯಕ, ಗಾಯಕಿಯರು ತೀರ್ಪುಗಾರರ ಜೊತೆ ಮೆಂಟರ್ಗಳಾಗಿ ತಮ್ಮ ತಂಡದ ಪ್ರತಿಯೊಬ್ಬ ಸ್ಪರ್ಧಿಯನ್ನೂ ತಿದ್ದಿ ತೀಡಿ, ಅವರಲ್ಲಿರುವ ವಿಶೇಷ ಪ್ರತಿಭೆಯನ್ನು ವೇದಿಕೆಯ ಮೇಲೆ ಪ್ರಸ್ತುತಪಡಿಸುವಲ್ಲಿ ಶ್ರಮವಹಿಸಿದ್ದಾರೆ. ನಿರೂಪಕಿ ಅನುಶ್ರೀ ಅವರು ಸರಿಗಮಪ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದಾರೆ.
‘ಸರಿಗಮಪ’ ಕಾರ್ಯಕ್ರಮದ ಫಿನಾಲೆಯಲ್ಲಿ ರಮೇಶ್ ಅರವಿಂದ್ (Ramesh Aravind) ಅವರು ‘ಶಿವಾಜಿ ಸುರತ್ಕಲ್’ ಸಿನಿಮಾ ತಂಡದ ಜೊತೆ ಈ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಆಗಮಿಸಿ ವೇದಿಕೆಯ ಮೆರಗನ್ನು ಹೆಚ್ಚಿಸಿದ್ದಾರೆ. ಅಂತಿಮ ಟಾಪ್ 6 ಸ್ಪರ್ಧಿಗಳಾಗಿ ಮಂಗಳೂರಿನ ತನುಶ್ರೀ, ಬೆಂಗಳೂರಿನ ಕುಷಿಕ್, ಮೈಸೂರಿನ ಗುರುಪ್ರಸಾದ್, ಉಡುಪಿಯ ಶಿವಾನಿ ನವೀನ್ ಕೊಪ್ಪ, ಸೊಲ್ಲಾಪುರದ ರೇವಣಸಿದ್ಧ ಮತ್ತು ಕುಶಾಲನಗರದ ಪ್ರಗತಿ ಬಡಿಗೇರ್ ಸಂಗೀತ ಹಣಾಹಣಿಯಲ್ಲಿದ್ದಾರೆ. ಗೆಲುವಿನ ವಿಜಯಲಕ್ಷ್ಮೀ ಯಾರ ಪಾಲಾಗಲಿದ್ದಾಳೆ ಎಂಬುದನ್ನ ಕಾದುನೋಡಬೇಕಿದೆ.