ಬೆಂಗಳೂರು: ಸಂಗೀತ ತರಬೇತಿಗೆ ಹೋಗದೆ, ಕುರಿಕಾಯುತ್ತಾ ಹಾಡುಗಳನ್ನು ಹಾಡಿಕೊಂಡು ಇಂದು ಸರಿಗಮಪ ವೇದಿಕೆಯನ್ನೇರಿ ಜನರ ಮೆಚ್ಚುಗೆಯನ್ನು ಗಳಿಸಿರುವ ಹಾವೇರಿಯ ಹನುಮಂತ ಅವರಿಗೆ ಅದೃಷ್ಟ ಒಲಿದು ಬಂದಿದೆ.
ಹನುಮಂತ ಅವರ ಪ್ರತಿಭೆ ನೋಡಿ ಗಾಯಕ ವಿಜಯ್ ಪ್ರಕಾಶ್ ಅವರು, ತಾವೇ ಹನುಮಂತನಿಗೆ ಸಂಗೀತ ಕಲಿಸುವ ಭರವಸೆ ನೀಡಿದ್ದಾರೆ. ಹನುಮಂತ ‘ಸರಿಗಮಪ ಸೀಸನ್ 15’ ಮೆಗಾ ಆಡಿಷನ್ ನಲ್ಲಿ ಆಯ್ಕೆಯಾಗಿದ್ದು, ‘ನಿನ್ನೊಳಗ ನೀನು ತಿಳಿದು ನೋಡಣ್ಣ..’ ಎಂಬ ಜನಪದ ಗೀತೆಯನ್ನ ಹಾಡಿದ್ದರು. ಇವರ ಹಾಡನ್ನು ಕೇಳಿ ತೀರ್ಪುಗಾರರು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಅಷ್ಟೇ ಅಲ್ಲದೇ ಮಹಾ ಗುರುಗಳಾದ ಹಂಸಲೇಖ ಅವರು ತಮ್ಮ ಹೆಗಲ ಮೇಲೆ ಇದ್ದ ಕೌದಿಯನ್ನು ಹನುಮಂತರಿಗೆ ಹಾಕಿ, ಅವರು ಹಾಕಿದ್ದ ಟವೆಲ್ ಅನ್ನು ತಮ್ಮ ಹೆಗಲ ಮೇಲೆ ಹಾಕಿಸಿಕೊಂಡಿದ್ದರು. ಇದನ್ನೂ ಓದಿ: ಓದಿಲ್ಲ, ಸಂಗೀತ ತರಬೇತಿ ಪಡೆದಿಲ್ಲ, ಕುರಿ ಮೇಯಿಸುತ್ತಾ ಸರಿಗಮಪ ವೇದಿಕೆಯೇರಿದ ಹನುಮಂತನ ಕಥೆ
ಇದೇ ವೇಳೆ ನೀನು ಹಾಡನ್ನು ಅದ್ಭುತವಾಗಿ ಹಾಡಿದೆ. ನೀನು ಹಾಡು ಕಲಿಯುತ್ತಿದ್ದೀಯಾ ಎಂದು ಕೇಳುವುದು ಸರೀನಾ.. ಇಲ್ವಾ.. ಗೊತ್ತಿಲ್ಲ. ಆದರೆ, ನಾನು ನನಗೆ ಗೊತ್ತಿರುವಷ್ಟು ಸಂಗೀತವನ್ನು ನಿನ್ನ ಜೊತೆಗೆ ಹಂಚಿಕೊಳ್ಳುತ್ತೇನೆ ಅಂತ ವಿಜಯ್ ಪ್ರಕಾಶ್ ಹೇಳುವ ಮೂಲಕ ಹನುಮಂತನಿಗೆ ತಾವೇ ಸಂಗೀತ ಕಲಿಸುವ ಭರವಸೆಯನ್ನು ನೀಡಿದ್ದಾರೆ.
ನನ್ನ ಜೀವನದ ಪಯಣದಲ್ಲಿ ನಾನು ಅನೇಕರನ್ನು ಭೇಟಿ ಮಾಡಿದ್ದೇನೆ. ಶಕ್ತಿಶಾಲಿ ಇರುವವರು, ಶ್ರೀಮಂತರು ಮತ್ತು ಚಾಣಾಕ್ಷರು ಹೀಗೆ ಎಲ್ಲರನ್ನು ನೋಡಿದ್ದೇನೆ. ಆದರೆ ಜೀವನವನ್ನ ಜೀವಿಸುತ್ತಿರುವ ಒಬ್ಬ ವ್ಯಕ್ತಿಯನ್ನು ಇಂದು ಭೇಟಿ ಮಾಡಿದೆ. ಭಗವಂತನ ಸೃಷ್ಟಿಯಲ್ಲಿ ಬದುಕನ್ನ ಹೇಗೆ ಬದುಕಬೇಕು ಎಂದು ತೋರಿಸುವ ಒಬ್ಬ ವ್ಯಕ್ತಿಯನ್ನ ಮೊದಲ ಬಾರಿಗೆ ಭೇಟಿಯಾಗುತ್ತಿದ್ದೇನೆ ಎಂದು ವಿಜಯ ಪ್ರಕಾಶ್ ಹನುಮಂತನ ಬಗ್ಗೆ ಮಾತನಾಡಿದ್ದಾರೆ.
ಈ ವೇದಿಕೆ ಮೇಲೆ ಬಹಳ ಗೌರವ ಬರುತ್ತಿದೆ. ಕುರಿ ಕಾಯಿಸುವ ಒಬ್ಬ ಹುಡುಗ ಈ ವೇದಿಕೆ ಮೇಲೆ ಬಂದಿದ್ದಾನೆ. ಇದು ಎಷ್ಟೋ ಜನಪದರ ಕನಸಾಗಿದೆ. ಜೀವಿಸಲು ಯೋಚನೆ ಮಾಡುವವನು ಬುದ್ಧಿವಂತ, ಯೋಚನೆನೇ ಮಾಡದೆ ಜೀವಿಸುವವನು ಹನುಮಂತ ಎಂದು ಸಂಗೀತ ನಿರ್ದೇಶಕ ಹಂಸಲೇಖ ಅವರು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv