ಬೆಂಗಳೂರು : ಸುಗ್ಗಿ ಹಬ್ಬ ಸಂಕ್ರಾಂತಿಗೆ ಕೌಂಟ್ ಡೌನ್ ಸ್ಟಾರ್ಟ್ ಆಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಸಂಕ್ರಾಂತಿಯ ಸಂಭ್ರಮ ಈಗಾಗಲೇ ಆರಂಭಗೊಂಡಿದೆ. ನಗರದ ನಾಗಶೆಟ್ಟಿಹಳ್ಳಿಯ ರಾಧಾಕೃಷ್ಣ ಪಬ್ಲಿಕ್ ಶಾಲೆಯಲ್ಲಿ ಇವತ್ತು ಸಂಕ್ರಾಂತಿಯನ್ನ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಹಬ್ಬಕ್ಕೆ ಮುಖ್ಯ ಅತಿಥಿಯಾಗಿ ಗಟ್ಟಿಮೇಳ ಖ್ಯಾತಿಯ ನಟ ರಕ್ಷ್ ಆಗಮಿಸಿದ್ದರು.
ವಿದ್ಯಾರ್ಥಿಗಳೆಲ್ಲಾ ಸೇರಿ ಶಾಲೆಯಲ್ಲಿ ಹಳ್ಳಿ ಸೊಗಡನ್ನ ನಿರ್ಮಿಸಿದ್ದರು. ಕಬ್ಬಿನ ಚಪ್ಪರವನ್ನು ಹಾಕಿ, ಧಾನ್ಯಗಳ ರಾಶಿಗೆ ಪೂಜಿಸಿದರು. ಜೊತೆಗೆ ಪುಟ್ಟ ಪುಟ್ಟ ಮಕ್ಕಳು, ಸೊಪ್ಪು ತರಕಾರಿಗಳ ವ್ಯಾಪಾರ ಮಾಡಿ ಸಂತೆ ನಿರ್ಮಿಸಿದ್ದರು. ಶಾಲೆಯ ಆವರಣದೊಳಗೆ ಗೋಪೂಜೆಯನ್ನು ಮಾಡಿ, ಬಣ್ಣ ಬಣ್ಣದ ರಂಗೋಲಿಗಳನ್ನು ಹಾಕಿ, ಗಾಳಿಪಟವನ್ನು ಸಾಮೂಹಿಕವಾಗಿ ಹಾರಿಸಿದರು. ವಿಶೇಷವಾಗಿ ಸಾಮೂಹಿಕವಾಗಿ ಪೊಂಗಲ್ ತಯಾರಿಸಲಾಯಿತು.
ಮಕ್ಕಳು ಪೋಷಕರು, ಶಿಕ್ಷಕರು ಎಲ್ಲರೂ ಬಣ್ಣಬಣ್ಣದ ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದರು. ಒಟ್ಟಿನಲ್ಲಿ ಈ ರೀತಿಯ ಹಬ್ಬದ ಆಚರಣೆಯಿಂದ ವಿದ್ಯಾರ್ಥಿಗಳಿಗೆ ನಮ್ಮ ಸಂಪ್ರದಾಯ, ಸಂಸ್ಕೃತಿಯನನ್ನು ಪರಿಚಯಿಸಿತ್ತು.