ಲಂಡನ್: ಜೂನ್ 5ರಂದು ದಕ್ಷಿಣಾ ಆಫ್ರಿಕಾ ವಿರುದ್ಧ ನಡೆಯಲಿರುವ ಪಂದ್ಯದ ಮೂಲಕ ಟೀಂ ಇಂಡಿಯಾ ಅಧಿಕೃತವಾಗಿ 2019ರ ವಿಶ್ವಕಪ್ ಪ್ರಯಾಣವನ್ನು ಆರಂಭ ಮಾಡಲಿದೆ. ಆದರೆ ಮೊದಲ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲುಂಡ ಕೊಹ್ಲಿ ಬಳಗ ನಿರಾಸೆ ಮೂಡಿಸಿದೆ. ಇದೇ ವೇಳೆ ತಂಡದ ಆಡುವ 11ರ ಬಳಗ ಆಯ್ಕೆ ಬಗ್ಗೆ ಹಲವು ಕ್ರಿಕೆಟ್ ವಿಶ್ಲೇಷಕರು ಸಲಹೆ ನೀಡಿದ್ದು, ಸಂಜಯ್ ಮಂಜ್ರೇಕರ್ ಕೂಡ ತಮ್ಮ ಸಲಹೆಯನ್ನು ಮುಂದಿಟ್ಟಿದ್ದಾರೆ.
ಇಂಗ್ಲೆಂಡ್ ನೆಲದ ಪಿಚ್ಗೆ ಅನುಗುಣವಾಗಿ ತಂಡದ ಬೌಲರ್ ಗಳ ಆಯ್ಕೆ ಆಗಬೇಕಿದೆ. ಪರಿಣಾಮ ಟೀಂ ಇಂಡಿಯಾ ಹೊಂದಿರುವ ಬುಮ್ರಾ, ಶಮಿ, ಭುವನೇಶ್ವರ್ ಮೂವರಲ್ಲಿ ಒಬ್ಬರನ್ನು ಕೈಬಿಟ್ಟು, ಕುಲ್ದೀಪ್ ಯಾದವ್-ಚಹಲ್ ಜೋಡಿಗೆ ಅವಕಾಶ ನೀಡಬೇಕು ಎಂದು ಮಂಜ್ರೇಕರ್ ತಿಳಿಸಿದ್ದಾರೆ.
ಕಳೆದ 2 ವರ್ಷಗಳಿಂದ ಇಬ್ಬರು ಸ್ಪಿನ್ನರ್ ಗಳು ವಿದೇಶಿ ನೆಲದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇವರನ್ನು ತಂಡದ ಆಯ್ಕೆ ಸಮಿತಿ ಆಡಲು ಬಯಸಿದರೆ ಭುವನೇಶ್ವರ್ ಅವರನ್ನು ಕೈಬಿಡಬಹುದು ಎಂದಿದ್ದಾರೆ. ತಂಡದಲ್ಲಿ ಬುಮ್ರಾ ಪ್ರಮುಖ ಬೌಲರ್ ಆಗಿದ್ದು, ಶಮಿ ನಿರಂತರವಾಗಿ ಬೌಲಿಂಗ್ ನಲ್ಲಿ ಸ್ಥಿರತೆ ಕಂಡುಕೊಂಡಿದ್ದಾರೆ. ಆದ್ದರಿಂದ ಭುವನೇಶ್ವರ್ ಅವರಿಗೆ ಆಡುವ ಅವಕಾಶ ಮಿಸ್ ಆಗಲಿದೆ ಎನ್ನಲಾಗಿದೆ. ಇತ್ತ ಹಾರ್ದಿಕ್ ಪಾಂಡ್ಯ ಆಲೌಂಡರ್ ಆಗಿರುವುದರಿಂದ ಈ ಸ್ಥಾನದಲ್ಲಿ ಯಾವುದೇ ಬದಲಾವಣೆ ಅಗತ್ಯವಿಲ್ಲ ಎಂದಿದ್ದಾರೆ.
ಕಳೆದ 6 ತಿಂಗಳ ಅವಧಿಯಲ್ಲಿ ಭುವನೇಶ್ವರ್ ಗಾಯದ ಸಮಸ್ಯೆ ಹಾಗೂ ವಿಶ್ರಾಂತಿ ನೀಡಿದ ಪರಿಣಾಮ ಸಾಕಷ್ಟು ಪಂದ್ಯಗಳನ್ನು ಆಡಿಲ್ಲ. ಭುವಿಗೆ ಏಕದಿನ ಮಾದರಿಯಲ್ಲಿ ಹೇಳಿಕೊಳ್ಳುವಷ್ಟು ಉತ್ತಮ ಸಾಧನೆ ಇಲ್ಲ. ಏಕದಿನ ಮಾದರಿಯಲ್ಲಿ ಭುವಿಗೆ 10 ರಲ್ಲಿ 6 ಅಂಕ ನೀಡಬಹುದು ಎಂದು ಸಂಜಯ್ ಮಂಜ್ರೇಕರ್ ಅಭಿಪ್ರಾಯ ಪಟ್ಟಿದ್ದಾರೆ.
ಟೀಂ ಇಂಡಿಯಾ ಮೇ 28ರ ಮಂಗಳವಾರ ಎರಡನೇ ಅಭ್ಯಾಸ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಕೊಹ್ಲಿ ಬಳಗ ಎದುರಿಸಲಿದೆ.