ಬೆಂಗಳೂರು: ಸ್ಯಾಂಡಲ್ವುಡ್ ನಟಿ ಸಂಜನಾ ತಮ್ಮ ಮೊದಲ ಚಿತ್ರದ ಶೂಟಿಂಗ್ ವೇಳೆ ತಮ್ಮ ಮೇಲೆ ಉಂಟಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿದ್ದರು. ಈ ಆರೋಪದ ಬಗ್ಗೆ ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್ ಅವರು ಸುದ್ದಿಗೋಷ್ಠಿ ನಡೆಸಿ ಮೀಟೂ ದುರುಪಯೋಗ ಮಾಡಿಕೊಂಡವರಲ್ಲಿ ಸಂಜನಾ ಮೊಟ್ಟ ಮೊದಲಿಗರು ಎಂದು ಹೇಳಿ ಕಿಡಿಕಾರಿದ್ದಾರೆ.
ಮೀಟೂ ಅಭಿಯಾನದ ಮೂಲಕ ಹೊರಬರುತ್ತಿರುವವರ ನಾಯಕಿಯರ ಬಾಯಿಯನ್ನು ಕೆಲವು ಸಂಘ ಬಾಯಿ ಮುಚ್ಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ನಿರ್ದೇಶಕರ ಸಂಘವನ್ನು ಕೂಡ ಉಲ್ಲೇಖ ಮಾಡಲಾಗುತ್ತಿದೆ. ಆದರೆ ನಿರ್ದೇಶಕರ ಸಂಘ ಮೀಟೂ ಅಭಿಯಾನವನ್ನು ಸ್ವಾಗತಿಸುತ್ತದೆ. ಶೋಷಣೆಗೆ ಒಳಗಾಗಿರುವ ಮಹಿಳೆಯ ಧ್ವನಿಯನ್ನು ಅಡಗಿಸಲು ನಾವು ಪ್ರಯತ್ನಿಸುತ್ತಿಲ್ಲ ಎಂದು ಅವರು ಹೇಳಿದರು.
ಯಾವುದೇ ನಿರ್ದೇಶಕನಿಗೆ ಸಮಸ್ಯೆಯಾದರೆ ಅವರು ನಿರ್ದೇಶಕರ ಸಂಘಕ್ಕೆ ಬಂದು ದೂರು ನೀಡುತ್ತಾರೆ. ಮೀಟೂ ಅಭಿಯಾನ ಮಾಧ್ಯಮಗಳ ಮೂಲಕ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹೇಳುವುದರ ಮೂಲಕ ನಿಮ್ಮ ಸಮಸ್ಯೆಗೆ ಬಗೆಹರಿಯುವುದಿಲ್ಲ. ಆಯಾ ಸಂಘಗಳಿಗೆ ಹೋಗಿ ನಿಮಗೆ ಆದ ಲೈಂಗಿಕ ಕಿರುಕುಳದ ಬಗ್ಗೆ ದೂರು ನೀಡಿ ಅದು ನಿಮಗೆ ಆಗದಿದ್ದರೆ ಕಾನೂನಿನ ಮೊರೆ ಹೋಗಿ. ಆದರೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹೇಳುವುದು ಸರಿಯಲ್ಲ ಎಂದು ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್ ಹೇಳಿದರು.
ಮೀಟೂ ಅಭಿಯಾನವನ್ನು ದುರುಪಯೋಗ ಮಾಡುವವರಲ್ಲಿ ಮೊಟ್ಟ ಮೊದಲಿಗರು ನಟಿ ಸಂಜನಾ. ಏಕೆಂದರೆ ಅವರು ಮಾಧ್ಯಮಗಳನ್ನು ಕರೆದು ಪತ್ರಿಕಾಗೋಷ್ಠಿ ಕರೆದು 12 ವರ್ಷಗಳ ಹಿಂದೆ ಅವರಿಗೆ ಗುರುತು ನೀಡಿದ ನಿರ್ದೇಶಕರ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. ಸಂಜನಾ ಮಾತನಾಡಿದ್ದು ತಪ್ಪು ಎಂದು ನಾವು ಹೇಳುತ್ತಿಲ್ಲ. ಆದರೆ ಸಂಜನಾ ನಿರ್ದೇಶಕರ ಮೇಲೆ ಮಾಡಿದ ಆರೋಪಗಳಲ್ಲಿ ಸಾಕಷ್ಟು ಸುಳ್ಳು ಹೇಳಿದ್ದಾರೆ. ಆ ಸುಳ್ಳು ಏನು ಎಂಬುದು ನಾನು ಹೇಳುತ್ತೇನೆ ಎಂದರು.
ಸಂಜನಾ ಅವರ ವಿಷಯಕ್ಕೂ ಹಾಗೂ ಈ ಪತ್ರಿಕಾಗೋಷ್ಠಿಗೂ ಯಾವುದೇ ಸಂಬಂಧವಿಲ್ಲ. ಸಂಜನಾ ಅವರಿಗೆ ಯಾವುದೇ ಲೈಂಗಿಕ ಕಿರುಕುಳ ನೀಡಿಲ್ಲ. ಇದು ಸಿನಿಮಾ ನಿರ್ದೇಶಕನ ಹಾಗೂ ಕಲಾವಿದನ ನಡುವಿನ ಆರೋಪ. ಒಬ್ಬ ನಿರ್ದೇಶಕ ತನ್ನ ಸಿನಿಮಾ ಚೆನ್ನಾಗಿ ಬರಬೇಕು ಎಂದು ತುಂಬಾ ಶ್ರಮಪಡುತ್ತಾರೆ. ನಿರ್ದೇಶಕರು ಈ ರೀತಿ ಶ್ರಮ ಪಡುವಾಗ ಕಲಾವಿದರಿಗೆ ಹಾಗೂ ತಂತ್ರಜ್ಞನರಿಗೆ ಕಷ್ಟವಾಗುವುದು ಸಹಜ. ಈ ರೀತಿ ಕಷ್ಟಪಟ್ಟಿದ್ದ ಮೇಲೆ ಸಿನಿಮಾ ಯಶಸ್ವಿಯಾದಾಗ ಅಲ್ಲಿ ನಿಜವಾದ ತೃಪ್ತಿ ಸಿಗುತ್ತದೆ. ಆ ಸಿನಿಮಾ ಬಿಡುಗಡೆಯಾದಾಗ ಆ ಚಿತ್ರತಂಡ ಯಶಸ್ಸಿನ ರುಚಿ ಉಂಡಿದೆ. ಅಂದು ಯಶಸ್ಸು ರುಚಿಸಿದ ತಟ್ಟೆಯಲ್ಲಿ ಈಗ ಉಗಳಬಾರದು ಎಂಬುದನ್ನು ಹೇಳುವುದಕ್ಕೆ ಈ ಪತ್ರಿಕಾಗೋಷ್ಠಿ ನಡೆಸಿದ್ದೇವೆ ಎಂದು ನಾಗೇಂದ್ರ ಪ್ರಸಾದ್ ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv