ವಿಜಯಪುರ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಹೆತ್ತ ತಂದೆ-ತಾಯಿ ಹಾಗೂ ಒಡಹುಟ್ಟಿದ ಅಕ್ಕನನ್ನು ಬರ್ಬರವಾಗಿ ಕೊಲೆ ಮಾಡಿದ ಅಮಾನವೀಯ ಘಟನೆ ಕರ್ನಾಟಕ- ಮಹಾರಾಷ್ಟ್ರದ ಗಡಿ ಭಾಗದಲ್ಲಿ ನಡೆದಿದೆ.
ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಉಮದಿಯ ತೋಟದ ಮನೆಯಲ್ಲಿ ಘಟನೆ ನಡೆದಿದ್ದು, ಸಿದ್ದಪ್ಪ ಅರಕೇರಿ ಕೊಲೆ ಮಾಡಿದ ಪಾಪಿ. ತಂದೆ ಗುರುಲಿಂಗಪ್ಪ ಅರಕೇರಿ (82), ತಾಯಿ ನಾಗವ್ವ ಅರಕೇರಿ (75) ಹಾಗೂ ಅಕ್ಕ ಸಮುದ್ರಾಬಾಯಿ (60) ಕೊಲೆಯಾದ ದುರ್ದೈವಿಗಳು.
ಆಸ್ತಿಯ ವಿಚಾರವಾಗಿ ಸಿದಪ್ಪ ಆಗಾಗ ತಂದೆ-ತಾಯಿ ಹಾಗೂ ಅಕ್ಕನ ಜೊತೆಗೆ ಜಗಳ ಮಾಡುತ್ತಿದ್ದ. ಬುಧವಾರ ಜಗಳ ತಾರಕಕ್ಕೇರಿದ ಪರಿಣಾಮ ಸಿದ್ದಪ್ಪ ಕೊಡಲಿಯಿಂದ ಮೂವರನ್ನೂ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಸಮೀಪದ ಉಮದಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಉಮದಿ ಪೊಲೀಸರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತ ದೇಹಗಳನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಸಾಗಿಸಿದ್ದಾರೆ.