ಬಾಗಲಕೋಟೆ: ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಮಾಡಲು ಅವರು ಉಳಿಯಬೇಕಲ್ಲ. ಇನ್ನೇನು ಕೆಲ ದಿವಸದಲ್ಲಿ ಲಿಂಗೈಕ್ಯರಾಗುತ್ತಾರೆ ಎಂದು ಮಾತೆ ಮಹಾದೇವಿ ಅವರ ಕುರಿತು ಸಂಗನಬಸವ ಸ್ವಾಮೀಜಿ ವ್ಯಂಗ್ಯವಾಡಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.
ಕೂಡಲಸಂಗಮದ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಕಳೆದ ಒಂದು ತಿಂಗಳಿಂದ ಕಿಡ್ನಿ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಅನಾರೋಗ್ಯದ ಮಧ್ಯೆಯೂ ಹುನಗುಂದ ತಾಲೂಕಿನ ಕೂಡಲಸಂಗಮದ ಶರಣಮೇಳದಲ್ಲಿ ಹಾಜರಾಗಿದ್ದರು. ಈ ವೇಳೆ ವೀರಶೈವರು ಜಾತಿ ವಿಷಬೀಜ ಬಿತ್ತುತ್ತಿದ್ದಾರೆ ನಾವಲ್ಲ. ಪಂಚಪೀಠಾಧೀಶ್ವರರು ಲಿಂಗಾಯತ ಜಂಗಮರನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಹೋರಾಟ ನಡೆಸಿದ್ದರು. ಇವರಿಗೆಲ್ಲ ನಾಚಿಕೆಯಾಗಬೇಕೆಂದು ಮಾತೆ ಮಹಾದೇವಿ ವಾಗ್ದಾಳಿ ನಡೆಸಿದ್ದರು.
ಈ ಕುರಿತು ಬಾದಾಮಿ ತಾಲೂಕಿನ ಗುಳೇದಗುಡ್ಡ ಪಟ್ಟಣದಲ್ಲಿ ಸೋಮವಾರ ಶಿವಯೋಗಮಂದಿರ ಸಂಸ್ಥೆ ಅಧ್ಯಕ್ಷ ಸಂಗನಬಸವ ಸ್ವಾಮೀಜಿ ಮಾತೆ ಮಹಾದೇವಿ ಕುರಿತು ವ್ಯಂಗ್ಯವಾಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಜನವರಿ 13ರಂದು ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟ ಮುಂದುವರಿಸುವುದಾಗಿ ಮಾತೆ ಮಹಾದೇವಿ ಹೇಳಿದ್ದಾರೆ. ಆದರೆ ಹೋರಾಟ ಮಾಡಲು ಅವರು ಉಳಿಯಬೇಕಲ್ಲ. ಅನಾರೊಗ್ಯದಿಂದ ಬಳಲುತ್ತಿರುವ ಮಾತೆ ಮಹಾದೇವಿ ಕೆಲ ದಿನಗಳಲ್ಲಿ ಲಿಂಗೈಕ್ಯರಾಗುತ್ತಾರೆ. ಇನ್ನು ಅವರೇನು ಹೋರಾಟ ಮಾಡ್ತಾರೆ ಅಂತ ಹೇಳಿಕೆ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv