ಬೆಂಗಳೂರು: ಕಡಲ ಕಿನಾರೆಯಲ್ಲಿ ಮೀನುಗಾರಿಕೆ ನಡೆಸೋ ಜನರ ನಡುವಿನ ಹುಡುಗನೊಬ್ಬನ ಕಥೆ ಹೊಂದಿರೋ ಚಿತ್ರ ಉಡುಂಬಾ. ನಿರ್ದೇಶಕ ಶಿವರಾಜ್ ಈ ಹಿಂದೆ ಒಂದಷ್ಟು ತಮಿಳು ಮತ್ತು ತೆಲುಗು ಚಿತ್ರಗಳ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದವರು. ಅಂಥಾ ಅನುಭವಗಳನ್ನೆಲ್ಲ ಒಟ್ಟುಗೂಡಿಸಿಯೇ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಮೂಲತಃ ಕನ್ನಡಿಗರೇ ಆಗಿರುವ ಶಿವರಾಜ್ ಬೇರೆ ಭಾಷೆಗಳ ಚಿತ್ರಗಳ ಮೂಲಕ ಅನುಭವ ದಕ್ಕಿಸಿಕೊಂಡಿದ್ದರೂ ತಾನು ನಿರ್ದೇಶನ ಮಾಡೋ ಮೊದಲ ಚಿತ್ರ ಕನ್ನಡದ್ದೇ ಆಗಿರಬೇಕೆಂಬ ಅಚಲ ಆಕಾಂಕ್ಷೆಯಿಟ್ಟುಕೊಂಡಿದ್ದರು. ಈ ತಪನೆಯಲ್ಲಿ ಈ ಸಿನಿಮಾಗಾಗಿ ವರ್ಷಗಟ್ಟಲೆ ಕಾದಿದ್ದಾರೆ. ವಿಶಿಷ್ಟವಾದ ಕಥೆಗೆ ಅಷ್ಟೇ ಶ್ರಮವಹಿಸಿ ಕಾವು ಕೊಟ್ಟು ಚೆಂದದ ಚಿತ್ರವನ್ನು ಕಟ್ಟಿಕೊಟ್ಟ ಖುಷಿಯಲ್ಲಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ಚಿತ್ರವೊಂದು ಈ ಥರದಲ್ಲಿ ಕ್ರೇಜ್ ಹುಟ್ಟು ಹಾಕಿರೋದು ನಿರ್ದೇಶಕರು ಮಾತ್ರವಲ್ಲದೇ ಇಡೀ ಚಿತ್ರತಂಡದ ಖುಷಿ ಹೆಚ್ಚಿಸಿದೆ.
ಇದೇ ತಿಂಗಳ 23ರಂದು ಈ ಚಿತ್ರ ತೆರೆಕಾಣುತ್ತಿದೆ. ಈಗ ಎಲ್ಲಿ ನೋಡಿದರೂ ಉಡುಂಬಾನದ್ದೇ ಅಬ್ಬರ. ಒಂದಷ್ಟು ತಡವಾಗುತ್ತಲೇ ಸಾಗಿ ಬಂದರೂ ಕಡೇಯ ಕ್ಷಣಗಳಲ್ಲಿ ಈ ಚಿತ್ರ ಸಖತ್ ಆಗಿಯೇ ಸೌಂಡು ಮಾಡುತ್ತಿದೆ. ಪವನ್ ಶೌರ್ಯರ ರಗಡ್ ನಟನೆ, ನಾಯಕಿ ಚಿರಶ್ರೀ ಅಂಚನ್ರ ಮುಗ್ಧ ಅಭಿನಯ, ಶರತ್ ಲೋಹಿತಾಶ್ವರ ವಿಶಿಷ್ಟವಾದ ಪಾತ್ರಗಳ ಝಲಕ್ಕುಗಳೊಂದಿಗೆ ಉಡುಂಬಾ ಬಹು ನಿರೀಕ್ಷಿತ ಚಿತ್ರವಾಗಿಯೂ ಬಿಂಬಿತವಾಗಿದೆ. ಹೀಗೆ ಅಬ್ಬರಿಸುತ್ತಲೇ ಶಿವರಾಜ್ರ ಮೊದಲ ಕನಸಿನಂತಾ ಉಡುಂಬಾ ಥೇಟರಿನತ್ತ ಧಾವಿಸಿ ಬರುತ್ತಿದ್ದಾನೆ.