ಬೆಂಗಳೂರು: ಒಂದೊಳ್ಳೆ ಕಂಟೆಂಟು, ಹೊಸತನಗಳನ್ನು ಜೀವಾಳವಾಗಿಸಿಕೊಂಡ ಚಿತ್ರಗಳನ್ನು ಕನ್ನಡದ ಪ್ರೇಕ್ಷಕರು ಯಾವತ್ತಿಗೂ ಕೈ ಬಿಡುವುದಿಲ್ಲ. ಇದುವರೆಗೂ ಈ ವಿಚಾರ ಅಡಿಗಡಿಗೆ ಸಾಬೀತಾಗುತ್ತಲೇ ಬಂದಿದೆ. ಅದು ರೂಪಾ ರಾವ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಗಂಟುಮೂಟೆ ವಿಚಾರದಲ್ಲಿಯೂ ನಿಜವಾಗಿದೆ. ಅಷ್ಟಕ್ಕೂ ಭರಾಟೆಯಂಥಾ ಸಿನಿಮಾಗಳ ಅಬ್ಬರದ ನಡುವೆ ಈ ಚಿತ್ರ ತೆರೆಗಾಣುವ ಸನ್ನಾಹದಲ್ಲಿದ್ದಾಗಲೇ ಜನರಲ್ಲೊಂದು ಅಚ್ಚರಿ ಮನೆ ಮಾಡಿಕೊಂಡಿತ್ತು. ಆದರೆ ನೋಡುಗರೆಲ್ಲರಿಗೂ ಅಚ್ಚರಿಯಂಥಾ ತಾಜಾ ಕಥೆಯೊಂದಿಗೆ ಗಂಟುಮೂಟೆ ಚಿತ್ರ ಈ ರೇಸಿನಲ್ಲಿ ಜಯಿಸಿಕೊಂಡಿದೆ.
ಇದು ನವ ನಿರ್ದೇಶಕಿ ರೂಪಾ ರಾವ್ ಅವರ ಚೊಚ್ಚಲ ಚಿತ್ರ. ಆದರೆ ಮೊದಲ ಹೆಜ್ಜೆಯಲ್ಲಿ ಎಂಥವರಾದರೂ ಹಿಂದೇಟು ಹಾಕುವಂಥಾ ಕಥೆಯನ್ನೇ ಅವರು ಈ ಮೂಲಕ ಹೇಳಿದ್ದಾರೆ. ತೊಂಬತ್ತರ ದಶಕದ ಹೈಸ್ಕೂಲು ಪ್ರೇಮ ಕಥಾನಕವನ್ನೊಳಗೊಂಡಿರೋ ಗಂಟುಮೂಟೆ ಪ್ರತಿಯೊಬ್ಬರನ್ನೂ ಖುಷಿಗೊಳಿಸಿದೆ. ಅನೇಕರು ತಮ್ಮದೇ ನೆನಪುಗಳ ನೆತ್ತಿ ಸವರಿಕೊಂಡು ಥ್ರಿಲ್ ಆಗಿದ್ದಾರೆ. ಮತ್ತೆ ಕೆಲವರು ಇಲ್ಲಿರೋ ಬಿಡುಬೀಸಾದ ನಿರೂಪಣೆ ಮತ್ತು ತಣ್ಣಗೆ ಪ್ರವಹಿಸುವ ಭಾವತೀವ್ರತೆಗೆ ಮನ ಸೋತಿದ್ದಾರೆ. ಎಲ್ಲರನ್ನೂ ಒಂದೊಂದು ರೀತಿಯಲ್ಲಿ ಆವರಿಸಿಕೊಂಡಿರುವ ಈ ಚಿತ್ರವೀಗ ಅದೇ ಬಲದಿಂದ ಗೆದ್ದಿದೆ.
ಅಷ್ಟಕ್ಕೂ ಬಿಡುಗಡೆಗೂ ತುಂಬಾ ಮುಂಚೆಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಈ ಚಿತ್ರ ಹೆಸರು ಗಳಿಸಿತ್ತು. ಅಲ್ಲಿಯೂ ಮೆಚ್ಚುಗೆ ಗಳಿಸಿಕೊಂಡು ಪ್ರಶಸ್ತಿ ಪಡೆಯೋ ಮೂಲಕ ಕನ್ನಡದ ಘನತೆಯನ್ನು ಮಿರುಗಿಸಿತ್ತು. ಇಂಥಾ ಚಿತ್ರವೀಗ ಕನ್ನಡದಲ್ಲಿಯೂ ಗೆದ್ದಿದೆ. ದೊಡ್ಡ ಚಿತ್ರಗಳ ಭರಾಟೆಯಲ್ಲಿ ಹೊಸಬರ ಚಿತ್ರಗಳು ನೆಲೆ ಕಂಡುಕೊಳ್ಳೋದು ಎಂಥಾ ಸವಾಲಿನ ಸಂಗತಿ ಅನ್ನೋದು ಗೊತ್ತಿರುವಂಥಾದ್ದೇ. ಅದನ್ನು ರೂಪಾ ರಾವ್ ಸಾಧ್ಯವಾಗಿಸಿದ್ದಾರೆ. ತೇಜು ಬೆಳವಾಡಿ, ನಿಶ್ಚಿತ್ ಮುಂತಾದ ಹೊಸಬರನ್ನೇ ಚೆಂದಗೆ ನಟಿಸುವಂತೆ ಮಾಡಿ, ಅತ್ಯಂತ ಅಪರೂಪದ ಕಥೆ ಹೇಳುವ ಮೂಲಕ ರೂಪಾ ರಾವ್ ಕನ್ನಡ ಚಿತ್ರರಂಗದ ಭರವಸೆಯ ನಿರ್ದೇಶಕಿಯಾಗಿ ನೆಲೆ ಕಂಡುಕೊಂಡಿದ್ದಾರೆ.
https://www.facebook.com/publictv/videos/742395332886864/?v=742395332886864