ದಾವಣಗೆರೆ: ಸ್ಯಾಂಡಲ್ವುಡ್ ನಟ ಸುದೀಪ್ ಇಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಳ್ಳಿನಲ್ಲಿ ಇರುವ ವಾಲ್ಮೀಕಿ ಗುರುಪೀಠಕ್ಕೆ ಭೇಟಿ ನೀಡಲಿದ್ದಾರೆ.
ಸುದೀಪ್ ಅವರು ಬೆಳಗ್ಗೆ 11ಕ್ಕೆ ವಾಲ್ಮೀಕಿ ಗುರುಪೀಠದ ಪ್ರಸನಾನಂದ ಪುರಿ ಸ್ವಾಮೀಜಿ ಭೇಟಿ ಮಾಡಲಿದ್ದಾರೆ. ಇತ್ತೀಚೆಗೆ ಮದಕರಿ ಚಿತ್ರದ ವಿಚಾರವಾಗಿ ಕೇಳಿ ಬಂದ ವಿವಾದಗಳಿಗೆ ಸ್ಪಷ್ಟನೆ ನೀಡುವ ಸಾಧ್ಯತೆಗಳಿವೆ. ನಂತರ ದಾವಣಗೆರೆಯಲ್ಲಿ ದೊಣ್ಣೆ ಬಿರಿಯಾನಿ ಹೋಟೆಲ್ ಉದ್ಘಾಟಿಸಲಿದ್ದಾರೆ.
ಸೆಪ್ಟಂಬರ್ 30 ರಂದು ನಟ ಕಿಚ್ಚ ಸುದೀಪ್ ದಾವಣಗೆರೆ ಜಿಲ್ಲೆಗೆ ಆಗಮಿಸಬೇಕಿತ್ತು. ಆದರೆ ಕಾರಣಾಂತರದಿಂದ ಸುದೀಪ್ ಬರಲು ಸಾಧ್ಯವಾಗದೇ ವಿಡಿಯೋ ಮೂಲಕ ಸಂದೇಶ ರವಾನಿಸಿ ಕ್ಷಮೆ ಕೇಳಿದ್ದರು. ದಾವಣಗೆರೆಯ ಬಿಐಟಿ ಕಾಲೇಜ್ ರೋಡಿನಲ್ಲಿರುವ ಕಿಚ್ಚ ಸುದೀಪ್, ದೊನ್ನೆ ಬಿರಿಯಾನಿ ಹೋಟೆಲ್ ಪ್ರಾರಂಭೋತ್ಸವಕ್ಕೆ ಸುದೀಪ್ ಅವರು ಆಗಮಿಸಬೇಕಿತ್ತು. ನಿರ್ದೇಶಕ ನಂದ ಕಿಶೋರ್ ಒಡೆತನದ ದೊನ್ನೆ ಬಿರಿಯಾನಿ ಹೋಟೆಲ್ ಇದಾಗಿದೆ. ಈ ಹೋಟೆಲ್ ಉದ್ಘಾಟನೆಗೆ ಸುದೀಪ್ ಬರಬೇಕಿತ್ತು.
ಎಲ್ಲರಿಗೂ ಕಿಚ್ಚನ ನಮಸ್ಕಾರ, ನಾನು ದಾವಣಗೆರೆಯಲ್ಲಿರುವ ಒಂದು ಹೋಟೆಲ್ ಓಪನಿಂಗ್ ಗೆ ಬರಬೇಕಿತ್ತು. ಕಾರಣಾಂತರದಿಂದ ಬರಲು ಸಾಧ್ಯವಾಗುತ್ತಿಲ್ಲ. ಕ್ಷಮೆ ಇರಲಿ, ಇದನ್ನು ಮುಂದಕ್ಕೆ ಹಾಕಿ ನಾನು ಅಕ್ಟೋಬರ್ 19 ರಂದು ನಾನು ಬರುತ್ತಿದ್ದೇನೆ. ಶಾಸಕ ಎಸ್ ವಿ ರಾಮಚಂದ್ರಪ್ಪ, ಹಾಗೂ ವಾಲ್ಮೀಕಿ ಶ್ರೀ ಸೇರಿದಂತೆ ನನ್ನನ್ನು ಕರೆದಿದ್ದರೋ ಅವರಿಗೆಲ್ಲ ನಂದಕಿಶೋರ್ ಪರ ಕ್ಷಮೆ ಕೇಳುತ್ತಿದ್ದೇನೆ. ಕಾರಣಾಂತರದಿಂದ ನಾನು ಹೈದರಾಬಾದಿನಲ್ಲಿ ಉಳಿದುಕೊಂಡಿದ್ದೇನೆ. 19ಕ್ಕೆ ಖಂಡಿತ ನಾನು ಬರುತ್ತೇನೆ ಎಂದು ಸುದೀಪ್ ಹೇಳಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv