ಬೆಂಗಳೂರು: ನಟ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನಗಲಿ ಇಂದಿಗೆ 12ನೇ ದಿನ. ಆದರೆ ಇಂದಿಗೂ ಅಭಿಮಾನಿಗಳು ಅವರ ಸಮಾಧಿ ದರ್ಶನ ಮಾಡುತ್ತಲೇ ಇದ್ದಾರೆ. ಇತ್ತ ತಮ್ಮನ ಅಗಲಿಕೆ ನೋವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೇ ಸಹೋದರರು ಪ್ರತಿನಿತ್ಯ ಕಣ್ಣೀರಿಡುತ್ತಿದ್ದಾರೆ. ಸಹೋದರ ರಾಘವೇಂದ್ರ ರಾಜ್ ಕುಮಾರ್ ಅವರು ಪ್ರತಿದಿನ ಮುದ್ದಿನ ತಮ್ಮನ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಾ ಹಳೆಯ ನೆನಪುಗಳನ್ನು ಮೆಲುಕು ಹಾಕಿಕೊಳ್ಳುತ್ತಿದ್ದಾರೆ.
ಹೌದು. ಸದಾ ಮಗನೇ ಮಗನೇ ಎಂದು ಪುನೀತ್ ಅವರನ್ನು ಸಂಬೋಧಿಸುತ್ತಿರುವ ರಾಘಣ್ಣ ಇದೀಗ ಫೇಸ್ಬುಕ್ ನಲ್ಲಿ ತಮ್ಮನ ಬಗ್ಗೆ ಬರೆದುಕೊಂಡು ಭಾವುಕರಾಗಿದ್ದಾರೆ. ನಾನು ಒಬ್ಬ ನಿರುದ್ಯೋಗಿ ಆಗಿದ್ದೆ. ನೀನು ನನಗೆ ಸಮಾಜ ಸೇವೆ ಮಾಡುವ ಕೆಲಸ ಕೊಟ್ಟಿದ್ದಿ. ಯಾರಿಗೂ ತಿಳಿಯದಂತೆ ನೀನು ಸಮಾಜ ಸೇವೆ ಮಾಡುತ್ತಿದ್ದೆ. ಹೀಗಾಗಿ ನಿನ್ನಂತೆ ಸಮಾಜ ಸೇವೆ ಮಾಡಲು ನನಗೆ ಶಕ್ತಿ ನೀಡು ಮಗನೇ. ನಿನ್ನ ಚಿಂತನೆಗಳಿಂದಲೇ ನೀನು ಎಂದಿಗೂ ನಮ್ಮ ಜೊತೆಯಲ್ಲಿಯೇ ಇರುತ್ತಿ ಎಂದು ಬರೆದುಕೊಂಡಿದ್ದಾರೆ.
ಅಕ್ಟೋಬರ್ 29ರಂದು ಶುಕ್ರವಾರ ಬೆಳಗ್ಗೆ ಮನೆಯಲ್ಲಿ ವರ್ಕೌಟ್ ಮಾಡಿದ ಸಂದರ್ಭದಲ್ಲಿ ಅಪ್ಪುಗೆ ಆಯಾಸ ಕಾಣಿಸಿಕೊಂಡಿತು. ಹಾಗೆಯೇ ಸ್ಟೀಮ್ ಬಾತ್ ಮಾಡಿಕೊಂಡು ಪತ್ನಿ ಜೊತೆ ಸ್ಥಳೀಯ ರಮಣಶ್ರೀ ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲಿ ಇಸಿಜಿ ಮಾಡಿಸಿಕೊಂಡು ಇನ್ನೇನು ಹೊರಡುವಷ್ಟರಲ್ಲಿ ಅಲ್ಲಿಯೇ ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ಕಾರಿನಲ್ಲಿ ನಗರದ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಾದರೂ, ಅದು ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದರು.