ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್, ಸೃಜನ್ ಲೋಕೇಶ್ ಬೆನ್ನಲ್ಲೇ ಇದೀಗ ನಟ ಚಿಕ್ಕಣ್ಣ ಕೂಡ ಪ್ರಾಣಿಗಳ ಮೇಲೆ ಪ್ರೀತಿ ತೋರಿದ್ದಾರೆ.
ಚಿಕ್ಕಣ್ಣ ಅವರು ಮೈಸೂರು ಮೃಗಾಲಯದಲ್ಲಿ ಚಿರತೆ ದತ್ತು ಪಡೆಯುವ ಮೂಲಕ ಪ್ರಾಣಿ ಪ್ರೀತಿ ಮೆರೆದಿದ್ದಾರೆ. ಈ ಚಿರತೆಯನ್ನು ಚಿಕ್ಕಣ್ಣ, ಒಂದು ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ ಎನ್ನಲಾಗಿದೆ.
ಪ್ರಾಣಿ ದತ್ತು ಸ್ವೀಕಾರ ಯೋಜನೆಯಡಿ 35 ಸಾವಿರ ಹಣ ನೀಡಿ ಚಿರತೆ ದತ್ತು ಪಡೆದ ಚಿಕ್ಕಣ್ಣ, ಅದಕ್ಕೆ ‘ಭೈರ’ ಎಂದು ನಾಮಕರಣ ಮಾಡಿದ್ದಾರೆ. ಚಿಕ್ಕಣ್ಣ ಜೊತೆ ಹಲವು ಸ್ನೇಹಿತರಿಂದ ಪ್ರಾಣಿಗಳ ದತ್ತು ಸ್ವೀಕಾರ ನಡೆಯಿತು. ಚಿಕ್ಕಣ್ಣ ಸ್ನೇಹಿತರಾದ ಸಿದ್ದೇಗೌಡ, ಮೋಹನ್ ಕುಮಾರ್, ತಿಮ್ಮಯ್ಯ, ಸೋಮು ಪ್ರಾಣಿಗಳನ್ನು ದತ್ತು ತೆಗೆದುಕೊಂಡರು.
ಈ ಹಿಂದೆ ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ದರ್ಶನ್, ಸೃಜನ್ ಜೊತೆಗೆ ದೇವರಾಜ್ ಕುಟುಂಬ ಕೂಡ ಪ್ರಾಣಿಗಳನ್ನು ದತ್ತು ಪಡೆದುಕೊಂಡಿತ್ತು. ನಟ ದೇವರಾಜ್ ಕುಟುಂಬ ಚಿರತೆ, ದರ್ಶನ್ ಮತ್ತು ಸೃಜನ್ ಲೋಕೇಶ್ ರಿಂದ ಜಿರಾಫೆ ಮರಿಯನ್ನು ದತ್ತು ಪಡೆದಿದ್ದರು. ಈ ವೇಳೆ ಜಿರಾಫೆ ಮರಿಗೆ `ತೂಗುಲೋಕ್’ ಎಂದು ಸೃಜನ್ ಲೋಕೇಶ್ ನಾಮಕರಣ ಮಾಡಿದ್ದರು. ಇದಕ್ಕೂ ಮೊದಲು ಇಬ್ಬರು ಸೇರಿ ದತ್ತು ಪಡೆದಿದ್ದ ಹುಲಿಗಳಿಗೆ ದರ್ಶನ್ `ವಿನೀಶ್’ ಎಂದೂ ಸೃಜನ್ `ಅರ್ಜುನ್’ ಅಂತಲೂ ಹೆಸರಿಟ್ಟಿದ್ದರು. ಮೃಗಾಲಯದಲ್ಲಿ ಈ ಹುಲಿಗಳ ವಿಹಾರ ಕಂಡು ಸೃಜನ್ ಸಂತಸ ವ್ಯಕ್ತಪಡಿಸಿದ್ದರು. ಹಾಸ್ಯ ನಟ ಕೀರ್ತಿ ಕೂಡ ಮೊಸಳೆಯನ್ನು ದತ್ತು ಸ್ವೀಕರಿಸಿದ್ದರು.