ಬಳ್ಳಾರಿ: ಅಕ್ರಮವಾಗಿ ಮರಳು ಸಾಗಾಟಕ್ಕೆ ಯತ್ನಿಸುತ್ತಿದ್ದವರನ್ನು ಹಿಡಿಯಲು ಹೋದ ರಿಸರ್ವ್ ಪೊಲೀಸ್ ಇನ್ಸ್ಪೆಕ್ಟರ್ ಮೇಲೆಯೇ ವಾಹನ ಚಲಾಯಿಸಿ ಕೊಲೆ ಮಾಡಲು ಯತ್ನಿಸಿದ ಘಟನೆ ಬಳ್ಳಾರಿಯ ದತ್ತಾತ್ರೇಯ ದೇವಸ್ಥಾನದ ಬಳಿ ನಡೆದಿದೆ.
ಕಳೆದ ತಡ ರಾತ್ರಿ ಬಳ್ಳಾರಿಯಲ್ಲಿ ಬೊಲೆರೋ ವಾಹನದಲ್ಲಿ ಮರಳು ಸಾಗಾಟ ಮಾಡಲಾಗಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ರಿಸರ್ವ್ ಪೊಲೀಸ್ ಇನ್ಸ್ ಪೆಕ್ಟರ್ ಸರ್ದಾರ್ ಹಾಗೂ ಪೇದೆಯೊಬ್ಬರ ಮೇಲೆ ಮರಳು ಸಾಗಿಸುತ್ತಿದ್ದ ಚಾಲಕ ವಾಹನನವನ್ನು ಚಲಾಯಿಸಿ ಕೊಲೆ ಮಾಡಲು ಯತ್ನಿಸಿದ್ದಾನೆ.
ಅದೃಷ್ಟವಶಾತ್ ಘಟನೆಯಲ್ಲಿ ಪಾರಾಗಿರುವ ರಿಸರ್ವ್ ಪೊಲೀಸ್ ಇನ್ಸ್ ಪೆಕ್ಟರ್ ಸರ್ದಾರ್ ಅವರಿಗೆ ಸ್ವಲ್ಪ ಗಾಯಗಳಾಗಿದ್ದು ವಿಮ್ಸ್ ನಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಘಟನೆಯ ನಂತರ ಬೊಲೆರೋ ವಾಹನದ ಸಮೇತವಾಗಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಈ ಘಟನೆಯ ಕುರಿತು ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.