ಗದಗ: ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಕೋರರು ಹೆಣ ಹೂಳುವ ಜಾಗವನ್ನೂ ಬಿಡುತ್ತಿಲ್ಲ. ಹೆಣಗಳನ್ನು ಲೆಕ್ಕಿಸದೆ ಅಕ್ರಮ ಮರಳು ಲೂಟಿ ನಡೆದಿದೆ. ಮನೆ, ಮಠ ನಿರ್ಮಾಣಕ್ಕೆ ಹೆಣಗಳ ಅಸ್ಥಿಪಂಜರ ಸಮೇತ ಮರಳು ಸಾಗಾಟ ಮಾಡುತ್ತಿದ್ದಾರೆ. ಈ ಅಕ್ರಮ ದಂಧೆ ಬಗ್ಗೆ ಮಾತಾಡಲು ಗ್ರಾಮದ ಜನರು ಕೂಡ ಭಯ ಪಡುತ್ತಿದ್ದಾರೆ. ಇಷ್ಟೆಲ್ಲಾ ಅಕ್ರಮ ಮರಳು ದಂಧೆ ನಡೆಯುತ್ತಿದ್ದರೂ ಜಿಲ್ಲಾಡಳಿತ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ.
ಹೌದು. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ಪುಟ್ಟಗಾಂವ್ ಬಡ್ನಿ ಗ್ರಾಮದ ಹೊರವಲಯದ ಸ್ಮಶಾನ ಭೂಮಿಯಲ್ಲಿ ಎಗ್ಗಿಲ್ಲದೇ ಅಕ್ರಮ ಮರಳು ದಂಧೆ ನಡೆಯುತ್ತಿದೆ. ಸುಮಾರು ಮೂರು ಸಾವಿರ ಜನಸಂಖ್ಯೆಯಿರುವ ಪುಟ್ಟ ಹಳ್ಳಿಯಿದಾಗಿದ್ದು, ಅನಾದಿ ಕಾಲದಿಂದಲೂ ಗ್ರಾಮದ ಪಕ್ಕದಲ್ಲಿಯೇ ಇರುವ ಸ್ಮಶಾನ ಏಕೈಕ ಜಾಗ ಇದಾಗಿದೆ. ಆದರೆ ಇಲ್ಲೂ ಸಹ ಮರಳು ಮಾಫಿಯಾ ದಂಧೆಕೋರರು ಟ್ರ್ಯಾಕ್ಟರ್ ಮೂಲಕ ಮರಳುಗಾರಿಕೆ ಮಾಡುತ್ತಿದ್ದಾರೆ.
ನದಿ ಪಾತ್ರದ ಮರಳನ್ನು ಅಕ್ರಮವಾಗಿ ಎತ್ತುವುದು ಯಥೇಚ್ಛವಾಗಿ ನಡೆಯುತ್ತಲೇ ಇದೆ. ಇದೀಗ ಮರಳು ದಂಧೆಕೋರರು ಸ್ಮಶಾನದ ಮೇಲೂ ಕಣ್ಣು ಹಾಕಿದ್ದಾರೆ. ಅಲ್ಲಿಯೂ ಭೂಮಿ ಅಗೆದು ಅಸ್ಥಿಪಂಜರಗಳನ್ನು ಬಿಸಾಡಿ ಮರಳುಗಾರಿಕೆ ಮಾಡುತ್ತಿದ್ದಾರೆ.
ಎರಡು ವರ್ಷದ ಹಿಂದೆ ಅಕ್ರಮ ಮರಳು ಮಾಫಿಯಾ ಲಕ್ಷ್ಮೇಶ್ವರ ಪೋಲಿಸ್ ಠಾಣೆಗೆ ಬೆಂಕಿ ಹಚ್ಚುವ ಮಟ್ಟಿಗೆ ಹೋಗಿತ್ತು. ಇಡೀ ಪೊಲೀಸ್ ಠಾಣೆ ಸುಟ್ಟು ಕರಕಲಾಗಿತ್ತು. ಆದರೂ ಈ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮರಳು ದಂಧೆ ನಿಂತಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಚಂದ್ರಕಾಂತ ತಿಳಿಸಿದ್ದಾರೆ.
ಮರಳು ಮಾಫಿಯಾ ಗ್ರಾಮಸ್ಥರನ್ನು ಭಯಪಡುವಂತೆ ಮಾಡಿದೆ. ಗ್ರಾಮದಲ್ಲಿ ಈ ಬಗ್ಗೆ ಮಾತನಾಡಲು ಹಿಂದೇಟು ಹಾಕುವಂತಾಗಿದೆ. ಸ್ಮಶಾನಕ್ಕಿರುವ ಒಂದು ಜಾಗವನ್ನೂ ಬಿಡುತ್ತಿಲ್ಲ. ಇಲ್ಲಿರುವ ಹೆಣಗಳ ಅಸ್ಥಿ ಪಂಜರಗಳು ಮೇಲೆತ್ತಿ ಮರಳು ತೆಗೆದಾಗ ಸಾಕಷ್ಟು ಅಸ್ಥಿಪಂಜರಗಳು ಪತ್ತೆಯಾಗಿವೆ. ಇದು ಗ್ರಾಮದ ಜನರಲ್ಲಿ ಭಯ ಹುಟ್ಟಿಸಿದೆ. ಹೆಣಗಳ ಅಸ್ಥಿಪಂಜರ ಬೇರೆಡೆ ಬಿಸಾಡಿ ಮರಳು ದಂಧೆ ಮುಂದುವರಿಸಿದ್ದಾರೆ. ಸಾವು ಕಂಡ ದೇಹಗಳಿಗೆ ಸ್ಮಶಾನವೇ ದಿಕ್ಕು. ಈ ರುದ್ರಭೂಮಿ ಪಕ್ಕದಲ್ಲಿಯೇ ಹಳ್ಳ ಹರಿಯುತ್ತಿದ್ದು, ಮಳೆಗಾಲದಲ್ಲಿ ಹರಿದುಬಂದ ನೀರು ಜೊತೆಗೆ ಸಿಗುವ ಮರಳನ್ನು ಅಕ್ರಮವಾಗಿ ದೋಚುತ್ತಾ ಸ್ಮಶಾನದಲ್ಲಿರುವ ಪ್ರದೇಶದಲ್ಲಿಯೂ ಮರಳುಗಾರಿಕೆ ಮಾಡುತ್ತಿರುವವರ ವಿರುದ್ಧ ಕ್ರಮಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.