ಬೆಂಗಳೂರು: ಎಂ.ಸ್ಯಾಂಡ್ ಹಾಗೂ ಮರಳು ಸಾಗಿರುವ ಲಾರಿಗಳಿಗೆ ತಾರ್ಪಲ್ ಹಾಕುವುದು ಕಡ್ಡಾಯ, ಟಾರ್ಪಲ್ ಹಾಕದ ಲಾರಿ ಮಾಲೀಕರಿಗೆ ಮತ್ತು ಚಾಲಕರಿಗೆ ನೆಲಮಂಗಲ ಪ್ರಾದೇಶಿಕ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಬಳಿಯ ಲಕ್ಕೂರು ಸೇತುವೆ ಬಳಿ ಲಾರಿ ಚಾಲಕರಿಗೆ ಎಚ್ಚರಿಕೆ ನೀಡಿ, ಸ್ಥಳದಲ್ಲೇ ತಾರ್ಪಲ್ ಹಾಕಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುವ ಲಾರಿಗಳಿಂದ ಬೇರೆ ವಾಹನಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗಿ ಅಪಘಾತಗಳಿಗೆ ಕಾರಣವಾಗುತಿತ್ತು. ಅಪಘಾತ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾರಿಗೆ ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡುತ್ತಿದ್ದಾರೆ.
ನೆಲಮಂಗಲ ಸಾರಿಗೆ ಇಲಾಖೆಯ ಮೋಟಾರು ನಿರೀಕ್ಷಕ ಡಾ.ಧನ್ವಂತರಿ ಒಡೆಯರ್ ಸ್ಥಳದಲ್ಲೇ ಎಚ್ಚರಿಕೆ ನೀಡಿ, ಮರಳು ಹಾಗೂ ಎಂ ಸ್ಯಾಂಡ್ ಲಾರಿಗಳಿಗೆ ತಾರ್ಪಲ್ ಹಾಕದಿದ್ದಲ್ಲಿ ದಂಡ ವಿಧಿಸಲಾಗುವುದು. ಇದೀಗ ಮೊದಲ ಎಚ್ಚರಿಕೆ ನೀಡಿದ್ದೇವೆ, ಇದೇ ರೀತಿ ಮುಂದುವರಿದರೆ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
ತಾರ್ಪಲ್ ಹಾಕದಿದ್ದಲ್ಲಿ ಹತ್ತು ಸಾವಿರದವರೆಗೆ ದಂಡ ವಿಧಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು. ತಾರ್ಪಲ್ ಹಾಕದೆ ಮರಳು ಸಾಗಿಸಿದರೆ ಹಿಂಬದಿ ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತದೆ. ಇದರಿಂದಾಗಿ ಅಪಘಾತಗಳು ಹೆಚ್ಚುತ್ತವೆ ಎಂದು ತಿಳಿಸಿದರು.