ಉಡುಪಿ: ದೇಶದೆಲ್ಲೆಡೆ ಸಂಭ್ರಮದ ಗೌರಿ ಗಣೇಶ ಹಬ್ಬದ ಆಚರಣೆ ನಡೆಯುತ್ತಿದೆ. ಚೌತಿ ಹಬ್ಬ ಅಂದ್ರೆ ಎಲ್ಲೆಡೆ ಸಂಭ್ರಮ. ಇಂದು ಬೀದಿಬೀದಿಯಲ್ಲಿ ಗಣೇಶ ವೈಭವದಿಂದ ರಾರಾಜಿಸುತ್ತಾನೆ. ಈ ನಡುವೆ ಉಡುಪಿಯ ಸಮುದ್ರ ತೀರದಲ್ಲಿ ಮರಳು ಗಣಪ- ನಗರದಲ್ಲಿ ಬಿಸ್ಕೆಟ್ ಗಣಪ ಎಲ್ಲರನ್ನು ಸೆಳೆಯುತ್ತಿದ್ದಾನೆ.
ಮಲ್ಪೆಯ ಕಡಲ ತಡಿಯಲ್ಲಿ ಮರಳಿನಲ್ಲಿ ಗಣೇಶ ಮೈತಳೆದು ನಿಂತ್ರೆ ಉಡುಪಿ ಹೃದಯ ಭಾಗದಲ್ಲಿ ಇರುವ ವಿಚೀ ಮೋಟಾರ್ಸ್ ನಲ್ಲಿ ಬಿಸ್ಕೆಟ್ ಗಣೇಶ ಗಮನ ಸೆಳೆದ. ಮಲ್ಪೆ ಬೀಚ್ನಲ್ಲಿ ಮರಳುಶಿಲ್ಪ ಕಲಾವಿದ ಹರೀಶ್ ಸಾಗ ಮರಳಿನಲ್ಲಿ ಗಣೇಶನ ಕಲಾಕೃತಿಯನ್ನು ರಚಿಸಿದರು. ಅವರ ವಿಧ್ಯಾರ್ಥಿಗಳಾದ ನಾಗರಾಜ್, ಪೃಥ್ವಿ, ರೂಪೇಶ್ ಇದಕ್ಕೆ ಸಾಥ್ ನೀಡಿದರು.
ಭೂಗರ್ಭದಿಂದ ಉದ್ಭವವಾದ ಗಣಪ ಪ್ರವಾಸಿಗರಿಗೆ ಶುಭಾಶಯ ಕೋರುವ ಕಾಲ್ಪನಿಕ ಮರಳಿನ ಮೂರ್ತಿಯನ್ನು ಇಲ್ಲಿ ರಚಿಸಲಾಗಿದೆ. ಮಾಲಿನ್ಯವನ್ನು ತಡೆಯಿರಿ ಎನ್ನುವ ಸಂದೇಶ ಸಾರುವ ಗಣೇಶ ಶಿಲ್ಪವನ್ನು ಮರಳಿನಲ್ಲಿ ರಚಿಲಾಗಿದೆ. 6 ಗಂಟೆಗಳ ಸತತ ಪರಿಶ್ರಮದಿಂದ ಹರೀಶ ಸಾಗ ಅವರ ತಂಡ ಸುಂದರ ಗಣೇಶನನ್ನು ಮಲ್ಪೆ ಬೀಚ್ ಮರಳಿನಲ್ಲಿ ಮೂಡಿಸಿ ಎಲ್ಲರ ಗಮನ ಸೆಳೆದರು.
ಬೀಚ್ಗೆ ಬಂದ ಪ್ರವಾಸಿಗರು ಕ್ಯಾಮೆರಾದಲ್ಲಿ ಗಣಪನ ಫೋಟೋ ಕ್ಲಿಕ್ಕಿಸುತ್ತಾ ಸೆಲ್ಫೀ ಕೂಡ ತೆಗೆದುಕೊಂಡರು. ಬೆಳಗ್ಗೆಯಿಂದ ಸುರಿದ ತುಂತುರು ಮಳೆ ಮರಳಿನ ಶಿಲ್ಪ ರಚಿಸಲು ಅಡ್ಡಿಯನ್ನುಂಟು ಮಾಡಿದ್ರೂ ಕೂಡ ಕೊನೆಗೂ ಉದ್ಭವ ಗಣಪನಿಗೆ ಅಂತಿಮ ಕಲಾ ಸ್ಪರ್ಶವನ್ನು ನೀಡೋದ್ರಲ್ಲಿ ಯಶಸ್ವಿಯಾದರು.
ಉಡುಪಿಯ ವೀಚಿ ಮೊಟಾರ್ಸ್ನಲ್ಲಿ ಮತ್ತೊಂದು ವಿಶಿಷ್ಟ ಗಣಪ ಮೂಡಿ ಬಂದ. ಸುಮಾರು 9 ಅಡಿ ಎತ್ತರದ ಗಣಪ ಇಲ್ಲಿ ಎದ್ದು ನಿಂತಿದ್ದಾನೆ. ಮಣ್ಣು, ಚಿನ್ನ ಬೆಳ್ಳಿಯಿಂದ ಮಾಡಿದ ಗಣಪನ ಮೂರ್ತಿಯಲ್ಲ ಇದು. ಕಲಾವಿದ ಶ್ರೀನಾಥ್ ಮೂರು ದಿನಗಳ ಸತತ ಪ್ರಯತ್ನದಿಂದ ಈ ಮುದ್ದು ಗಣೇಶನ ಕಲಾಕೃತಿಯನ್ನು ರಚನೆ ಮಾಡಿದ್ದಾರೆ.
ಈ ಗಣೇಶನ ಮೂರ್ತಿ ರಚನೆಗೆ ಸುಮಾರು 15 ಕೆಜಿ ಬಿಸ್ಕೆಟ್ ಉಪಯೋಗಿಸಿ ಗಣೇಶನ ಕಲಾಕೃತಿ ರಚನೆ ಮಾಡಿದ್ದಾರೆ. ಪ್ರತಿ ಬಾರಿಯೂ ಚೌತಿಗೆ ಹೊಸ ಹೊಸ ಪರಿಸರ ಸ್ನೇಹಿ ಗಣೇಶನ ಕಲಾಕೃತಿ ಮೂಡಿಸುವ ಈ ಕಲಾವಿದ ಈ ಬಾರಿ ಬಿಸ್ಕೆಟ್ ಗಣೇಶನ ಮೂಡಿಸುವ ಮೂಲಕ ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದಾರೆ.
ಬಿಸ್ಕೆಟ್ ಗಣೇಶನ ಮುಂದೆ ನಿಂತು ಜನ ಅಚ್ಚರಿಯಿಂದ ನೋಡಿದ್ದು ಮಾತ್ರವಲ್ಲದೇ ಸೆಲ್ಫೀ ಕಿಕ್ಲಿಸಿಕೊಂಡು ಖುಷಿಪಟ್ಟರು.