ಬೆಂಗಳೂರು: ಸಮೀರ್ ಮುಸ್ಲಿಂ ಸಮುದಾಯದ ಪ್ರತಿನಿಧಿ ಅಲ್ಲ ಎಂದು ಜಮಾತ್ ಎ ಇಸ್ಲಾಮಿ ಹಿಂದ್ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮಹಮದ್ ಕುನ್ಞಿ ತಿಳಿಸಿದ್ದಾರೆ.
‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಮಹಮದ್, ಯೂಟ್ಯೂಬರ್ ಸಮೀರ್ ಎಐ ವಿಡಿಯೋಗಳ ವಿಚಾರ ಚರ್ಚೆಯಲ್ಲಿದೆ. ಸಮೀರ್ ಯಾರೂ ಅನ್ನೋದೆ ಮುಸ್ಲಿಂ ಸಮುದಾಯಕ್ಕೆ ಗೊತ್ತಿರಲಿಲ್ಲ. ಸಮೀರ್ ಮುಸ್ಲಿಂ ಸಮುದಾಯದ ಪ್ರತಿನಿಧಿ ಅಂತೂ ಖಂಡಿತ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕದಲ್ಲಿ ಸುಮಾರು ಒಂದೂವರೆ ಕೋಟಿ ಮುಸ್ಲಿಮರಿದ್ದಾರೆ. ಇವರಲ್ಲಿ ಎಷ್ಟು ಜನರಿಗೆ ಸಮೀರ್ ಗೊತ್ತಿದ್ದಾನೆ? ನಾವು ದೊಡ್ಡ ಸಂಘಟನೆಗಳಲ್ಲಿ ಇರುವವರು. ನಮಗಂತೂ ಸಮೀರ್ ಗೊತ್ತೇ ಇರಲಿಲ್ಲ ಎಂದು ಹೇಳಿದ್ದಾರೆ.
ಈಗಲೂ ಅವನೊಬ್ಬ ಯೂಟ್ಯೂಬರ್ ಅನ್ನೋದಷ್ಟೇ ಗೊತ್ತು. ಅವನು ಮಾಡಿದ ವಿಡಿಯೋಗಳು ತಪ್ಪಿದ್ರೆ ಅವನಿಗೂ ಶಿಕ್ಷೆಯಾಗುತ್ತೆ. ಯಾವುದೇ ಧಾರ್ಮಿಕ ಕ್ಷೇತ್ರಗಳ ಮೇಲೆ ಅಪಪ್ರಚಾರ ಆಗಬಾರದು. ಇದು ನಮ್ಮ ಮೂಲಭೂತ ನಂಬಿಕೆ ಎಂದು ತಿಳಿಸಿದ್ದಾರೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಎಐ ವೀಡಿಯೋ ಹಂಚಿಕೊಂಡಿರುವ ಬಗ್ಗೆ ಸಮೀರ್, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.